Wednesday, May 13, 2009

ಬಿರು ಬಿಸಿಲಲ್ಲಿ ಬಡಿಯಿತೇ ಬರಸಿಡಿಲು...?



ಆದಿನ ಅದೇನೋ ಗೊತ್ತಿಲ್ಲ, ಯಾವ ದೇವರು ಪ್ರಸನ್ನನಾಗಿ, ಪ್ರತ್ಯಕ್ಷವಾಗಿ ಹೇಳಿದ್ದನೋ ಏನೋ ಎರಡೂವರೆ ವರ್ಷಗಳಿಂದ ಮನೆ ಬಿಟ್ಟು ನನ್ನೊಂದಿಗೆ ಎಲ್ಲೂ ಬರದ ನನ್ನರಸಿ ಇದ್ದಕ್ಕಿದ್ದಂತೆ ನಾಳೆ ಶಿವಗಂಗೆ ಬೆಟ್ಟಕ್ಕೆ ಹೋಗಿ ಬರೋಣ ಅಂತ ನನ್ನ ಬಳಿ ಫೋನಿನಲ್ಲಿ ಉಸುರಿದ್ದಳು. ನನಗಂತೂ ಆಶ್ಚರ್ಯದ ಮೇಲೆ ಅನುಮಾನ. ಇಷ್ಟು ದಿನ ಮನೆ, ಕಾಲೇಜು ಬಿಟ್ಟು ನನ್ನ ಜೊತೆ ಪಕ್ಕದ ಲಾಲ್ ಬಾಗ್ಗೂ ಬಾರದಿದ್ದ ಅವಳು, ಇಂದು ದೂರದ ಬೆಟ್ಟಕ್ಕೆ ಹೋಗಿ ಬರೋಣ ಎನ್ನುತ್ತಿದ್ದಾಳೆ ಎಂದರೆ? ನನಗಂತೂ ಆಕಾಶ ನನ್ನ ತಲೆಗೇ ಬಡಿಯುತ್ತಿದೆಯೇನೋ ಎಂಬಂತೆ ಭಾಸ. ಸ್ವರ್ಗ ಪಕ್ಕದಲ್ಲಿಯೇ ಇದೆ ಎನ್ನುವಷ್ಟು ಸಂತೋಷವಾಗಿತ್ತು ಎಂದು ಬೇರೆ ಹೇಳಬೇಕಾಗಿಲ್ಲ.
ಮೊದಲಿನಿಂದಲೂ ಅವಳು ಹಾಗೇನೆ. ಯಾವುದಕ್ಕೂ ತಲೆಕೆಡಿಸಿಕೊಳ್ಳದ, ಪಾಸಿಟಿವ್ವಾಗಿ ಯೋಚನೆ ಮಾಡುವ ಸ್ವಭಾವ. ಮನೋಶಾಸ್ತ್ರದ ವಿದ್ಯಾರ್ಥಿ ಬೇರೆ. ನನ್ನ ಅವಳ ಭೇಟಿ ಪ್ರತಿನಿತ್ಯ ಅವರ ಮನೆಯ ಬಳಿ ಹಾಗೂ ಕಾಲೇಜು ಬಳಿ ನಿರಂತರವಾಗಿ ನಡೆದೇ ಇತ್ತು. ಹೀಗಿದ್ದೂ ನಮ್ಮ್ಮಿಬ್ಬರ ಸಂಚಾರಿ ದೂರವಾಣಿಗಳು ಮಾತ್ರ ದಿನದ ೨೪ ಗಂಟೆಗಳಲ್ಲಿ ೧೨ ಗಂಟೆ ಸಕ್ರಿಯವಾಗಿ ತಮ್ಮ ಕಾರ್ಯನಿರ್ವಹಿಸುತ್ತಿದ್ದವು. ಹಾಗೆಯೇ ಅವಳನ್ನು ಕಾಲೇಜಿಗೆ ಡ್ರಾಪ್ ಹಾಗೂ ಪಿಕಪ್ ಹೊಣೆ ನನ್ನ ಮೇಲೆಯೇ ಇತ್ತು. ಕಾಲೇಜಿಗೆ ಹೋಗುವ ದಾರಿಯಲ್ಲಿ ಐಸ್ ಕ್ರೀಂ, ದೋಸೆ, ಕಾಫಿಗೆ ಅಂತೆಲ್ಲಾ ಮನೆಯವರಿಗೆ ತಿಳಿಯದ ಹಾಗೆ ಹೋಗುತ್ತಿದ್ದುದು, ಮನೆಯಿಂದ ಕಾಲೇಜಿಗೆ ನನ್ನ ದ್ವಿಚಕ್ರ ರಥದಲ್ಲಿ ಹೋಗುತ್ತಿದ್ದುದು, ಬರುತ್ತಿದ್ದುದು ಮಾತ್ರ ನನ್ನ ದಿನದ ಪ್ರಮುಖ ಕಾರ್ಯಕ್ರಮಗಳಲ್ಲಿ ಸೇರಿದ್ದವು.
 
ಇಷ್ಟಿದ್ದರೂ ಅವರ ಮನೆಯವರಿಗೆ ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯ ಇತ್ತು. ಹೇಳಿ ಕೇಳಿ ನಂದು ಪಕ್ಕದ ಏರಿಯಾ, ಹಾಗೆ ಅವರ ಮನೆಯವರೆಲ್ಲರೂ ಪರಿಚಯಸ್ತರು ಬೇರೆ. ಹಾಗಾಗಿ ಅವರ ಮನೆ(ನ) ಎಲ್ಲವೂ ನನಗೆ ಚೆನ್ನಾಗಿಯೇ ತಿಳಿದಿತ್ತು. ನನ್ನ ಮತ್ತು ಅವಳ ನಡುವಿನ ಸಂಬಂಧ ಎರಡೂವರೆ ವರ್ಷಗಳ ಹಿಂದೆಯೇ ಪ್ರೀತಿಗೆ ಬದಲಾಗಿದೆ ಎಂಬ ವಿಷಯ ಮಾತ್ರ ಅವರಿಗೆ ತಿಳಿದಿರಲಿಲ್ಲದಿದ್ದುದು ಮಾತ್ರ ನಮ್ಮಿಬ್ಬರಿಗೂ ಖುಷಿ ತಂದಿತ್ತು.
ಸೂರ್ಯ ಮೂಡುವ ಮುನ್ನವೇ ಅವಳ ಮನೆಗೆ ಧಾಂಗುಡಿಯಿಡುತ್ತಿದ್ದ ನಾನು, ನನ್ನ ಬರುವಿಕೆಗೆ ಕಾತರದಿಂದ ಕಾಯುತ್ತಿದ್ದ ಅವಳು...ಹೀಗೆ ನಮ್ಮಿಬ್ಬರ ಪ್ರೇಮ ಯಾರ ಅಡ್ಡಿ, ಆತಂಕವೂ ಇಲ್ಲದೆ ಹೆಮ್ಮರವಾಗಿ ಬೆಳೆಯುತ್ತಲೇ ಇತ್ತು.
 
ಹೀಗಿರುವಾಗ ನಾಳೆ ಬೆಟ್ಟಕ್ಕೆ ಹೋಗೋಣ ಎಂದು ಬೇರೆ ಹೇಳಿದ್ದಾಳೆ. ನನಗಂತೂ ಹಿಂದಿನ ರಾತ್ರಿಯೆಲ್ಲಾ ನಾಳಿನ ನನಸುಗಳ ಬಗ್ಗೆ ಯೋಚನೆ ಮಾಡುತ್ತಾ, ಸಾವಿರಾರು ಕನಸುಗಳನ್ನು ಹೆಣೆಯುತ್ತಾ, ರೋಮಾಂಚಕ ಕ್ಷಣಗಳನ್ನು ಮನದಲ್ಲೇ ನೆನೆಯುತ್ತಾ, ಮಾಡಬೇಕಾಗಿರುವ ಕಾರ್ಯಕ್ರಮಗಳ ಪಟ್ಟಿ ಮಾಡಿ ರಾತ್ರಿಯಿಡೀ ನಿದ್ರೆಯಿಲ್ಲದೆ ಹೊರಡಲು ಸಿದ್ದನಾದೆ. ಬೆಳಿಗ್ಗೆಯೇ ಆಕೆಯ ಮನೆಗೆ ಬಂದು ಜೊತೆಯಲ್ಲಿ ಹೋಗುವುದು ಎಂದು ಕಾರ್ಯಕ್ರಮ ನಿಗಧಿಯಾಯಿತು.
 
ನಿಗಧಿಯಂತೆ ಬೆಳಿಗ್ಗೆಯೇ ೫.೩೦ಕ್ಕೆ ಆಕೆಯ ಮನೆಯಲ್ಲಿ ನಾನು ಹಾಜರ‍್. ಆಕೆಯೂ ಸಹ ಬೆಳಿಗೆಯೇ ಎದ್ದು ನಾ ಬರುವುದನ್ನೇ ಎದುರುನೋಡುತ್ತಿದ್ದಳು. ನಂತರ ಹೊರಟಿತು ನಮ್ಮ ರಥ ಸವಾರಿ. ಎನ್.ಹೆಚ್ ೪ರಲ್ಲಿ ಹೊರಟ ನಮ್ಮ ಸವಾರಿ, ಸುಮಾರು ೧೧ ಗಂಟೆಗೆ ಬೆಟ್ಟ ತಲುಪಿತು. ಬೆಟ್ಟದ ತಳದಲ್ಲಿ ಬೆಳಗಿನ ಉಪಹಾರ ಮುಗಿಸಿ, ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತಲು ಶುರುಮಾಡಿದೆವು. ಈ ಮೊದಲು ಸ್ಥಳದ ಪರಿಚಯವಿಲ್ಲದಿದ್ದರೂ ಸಹ ಪರಿಚಯವಿರುವಂತೆ ಆಕೆ ನನ್ನನ್ನು ಕ್‌ಐ ಹಿಡಿದು ಕರೆದೊಯ್ಯುತ್ತಿದ್ದು ನನಗೆ ಬೆಟ್ಟವೇರಲು ಉತ್ಸಾಹ ತಂದುಕೊಡುತ್ತಿದ್ದರೂ ಮನದಲ್ಲಿ ಏನೋ ಆತಂಕ ಮೂಡಲಾರಂಭಿಸಿತ್ತು.
 
ಬೆಟ್ಟದ ಮಧ್ಯಭಾಗಕ್ಕೆ ಹೋಗುತ್ತಿದ್ದಂತೆ ದೇವಸ್ಥಾನ ಎದುರಾಯಿತು. ಅಲ್ಲಿ ಒಂದು ವಿಶೇಷತೆ ಇದೆ. ಅದೇ ಒಳಕಲ್ ತೀರ್ಥ. ಒಂದು ಬಂಡೆಯ ಮಧ್ಯದಲ್ಲಿ ಗುಂಡಿ ನಿ ರ್ಮಾಣವಾಗಿದ್ದು, ಇಲ್ಲಿ ಕ್ಯ ಹಾಕಿದರೆ ಪುಣ್ಯ ಮಾಡಿದ್ದರೆ ನೀರು ಸಿಗುತ್ತದೆ. ಈ ಎಂಬ ಫಲಕ ಅಲ್ಲಿ ತೂಗುಹಾಕಲಾಗಿತ್ತು. ನಾನು ಆಕೆ ಸಹ ಪ್ರಯತ್ನ ಮಾಡಿದೆವು. ನನಗೆ ನೀರು ಸಿಕ್ಕಿದರೆ ಆಕೆಗೆ ಸಿಗಲಿಲ್ಲ! ಆಕೆ ಬೇಜಾರು ಮಾಡಿಕೊಂಡರೂ ನಾನೇ ಸಮಾಧಾನ ಮಾಡಿ, ನೀರು ತೆಗೆದುಕೊಟ್ಟೆ.
ಮುಂದೆ ಬೆಟ್ಟ ಹತ್ತಲು ಮುಂದಾದಾಗ ಅಲ್ಲಿರುವ ವಾನರ ಸಂತತಿ ನಮ್ಮನ್ನು ಕೊಂಚ ಕಾಲ ರಂಜಿಸಿದವು. ಆಕೆಯ ಮೇಲೆ ಬಿದ್ದ ಮಂಗವೊಂದು ಆಕೆಯ ಬ್ಯಾಗ್ ಕಳಚಿಕೊಂಡು ಹೋಯಿತು. ನಂತರ ಅದರಲ್ಲಿ ಏನೂ ತಿನ್ನುವ ಪದಾರ್ಥ ಇಲ್ಲದಿದ್ದರಿಂದ ಬಿಸಾಡಿ ಹೋಯಿತು.ನಂತರ ಬೆಟ್ಟವನ್ನು ತರಾತುರಿಯಿಂದಲೇ ಏರಿ ಮೇಲೆ ಕುಳಿತೆವು.
 
ಇದುವರೆಗೂ ನನ್ನ ಜೊತೆಯಲ್ಲಿಯೇ ಪ್ರೀತಿಯಲ್ಲಿ ಮುಳುಗಿದ್ದ ಆಕೆ, ಇದ್ದಕ್ಕಿದ್ದಂತೆ ಏಕೋ ನನ್ನಿಂದ ದೂರ ಮ್‌ಔನವಾಗಿ ಕುಳಿತಳು. ಯಾಕೆಂದು ಕೇಳಿದರೆ ಏನೂ ಮಾತನಾಡಲಿಲ್ಲ. ನನ್ನ ಎರಡೂವರೆ ವರ್ಷಗಳ ಪ್ರೀತಿಯಲ್ಲಿ ಇದೇ ಮೊದಲ ಬಾರಿಗೆ ಆಕೆ ಈ ರೀತಿ ನನ್ನಿಂದ ದೂರ ಹೋಗಿ ಕುಳಿತಿದ್ದು. ನಿರಾತಂಕವಾಗಿ ಸಾಗಿದ್ದ ನನ್ನ ಪ್ರೀತಿಗೆ ಇದ್ದಕ್ಕಿದ್ದಂತೆ ಯಾರ ಶಾಪ ಬಿತ್ತೋ ಏನೋ...
 
ಮ್‌ಔನವಾಗಿ ಕುಳಿತಿದ್ದ ಆಕೆಯ ಬಳಿ ಹೋಗಿ ಏನೆಂದು ಕೇಳಿದಾಗ ಆಕೆ ಮಾತಿಗಳಿದಳು. ನನ್ನನ್ನು ಎಂದೂ ಹೆಸರಿಡಿದು ಕರೆಯದ ಆಕೆ ಅಂದು ಹೆಸರಿಡಿದು ಸಂಭೋಧಿಸಿದ್ದಳು. ನಿಜಕ್ಕೂ ನನಗೆ ವಿಚಿತ್ರವೆನಿಸಿದರೂ ಆಕೆಯ ವರ್ತನೆ ನನಗೇ ಶಾಕ್ ನೀಡಿತ್ತು. ಮುಂದುವರಿದು ಇನ್ನು ಮುಂದೆ ನಾನು ನೀನು ಸ್ನೇಹಿತರಾಗಿ ಮುಂದುವರೆಯೋಣ, ನನಗೆ ಪ್ರೀತಿ ಎಂದರೆ ಇಷ್ಟವಿಲ್ಲ. ನಾನು ನಿನಗೆ ತಕ್ಕಳಾದವಳಲ್ಲ, ನೀನು ಬೇರೆಯವರನ್ನು ಮದುವೆಯಾಗು, ನೀನು ಜೀವನದಲ್ಲಿ ಚೆನ್ನಾಗಿರುವುದೇ ನನಗಿಷ್ಟ ಎಂತೆಲ್ಲಾ ಬಡಬಡಿಸಿದಾಗ ನನಗಂತೂ ಆಕಾಶವೇ ಕಳಚಿ ತಲೆಯ ಮೇಲೇ ಬಿದ್ದಂತಾಯ್ತು.
 
ಒಂದು ಕ್ಷಣ ನಾನೆಲ್ಲಿದ್ದೇನೆ ಎಂಬುದೇ ನನಗೆ ಗೊತ್ತಾಗಲಿಲ್ಲ. ನಾನೇನು ಕನಸು ಕಾಣುತ್ತಿರಬೇಕು ಎಂದುಕೊಂಡರೆ ಅದು ಕನಸಲ್ಲ, ಕಟುಸತ್ಯವಾಗಿತ್ತು. ಎರಡೂವರೆ ವರ್ಷಗಳಿಂದ ನನ್ನ ಪ್ರಾಣಕ್ಕೆ ಪ್ರಾಣವಾಗಿದ್ದ ಆಕೆ ಇಂದೇಕೆ ಹೀಗೇಳುತ್ತಿದ್ದಾಳೆ ಎಂಬುದೇ ನನಗೆ ತಿಳಿಯದೆ ಹೋಯಿತು. ನಾನೇಕೆ ಇನ್ನೂ ಭೂಮಿಯ ಮೇಲೆ ಇದ್ದೇನೆ ಎಂಬ ಭಾವನೆ.ಬೆಟ್ಟದ ಮೇಲಿಂದ ಕೆಳಗೆ ಹಾರಲೇ ಎನಿಸಿತು. ಆಕೆ ತಮಾಷೆಗೆ ಹೀಗೆ ಮಾತನಾಡುತ್ತಿದ್ದಾಳೆ ಎಂದು ನಾನಂದುಕೊಂಡರೂ, ಆಕೆಯದು ತಮಾಷೆ ಅಲ್ಲ ಎಂದು ನನಗೆ ನಂತರವೇ ತಿಳಿದದ್ದು. ಹಿಂದಿನ ರಾತ್ರಿ ನಾನು ಅಂದುಕೊಂಡಿದ್ದೆಲ್ಲಾ ಒಂದೊಂದಾಗಿ ಕಳಚಿಕೊಳ್ಳತೊಡಗಿತು. ನನಗೆ ಮಾತೇ ಹೊರಡದಾಯಿತು. ಏನು ಮಾತನಾಡುವುದು?
 
ಏನೋ ಅವಳ ಮನಸ್ಥಿತಿ ಸರಿಯಿಲ್ಲವೇನೋ ಎಂದು ನಾನೂ ಸಹ ಸ್ವಲ್ಪ ಸಮಯ ಅವಳನ್ನು ಮಾತನಾಡಿಸದೆ ಸುಮ್ಮನೆ ಬಿಟ್ಟೆ. ಆದರೂ ಅವಳ ಮನಸ್ಸು ಬದಲಾಗಲಿಲ್ಲ. ಆಕೆ ಎಲ್ಲಾ ಆಲೋಚನೆ ಮಾಡಿಯೇ ಈ ನಿರ್ಧಾರಕ್ಕೆ ಬಂದಿದ್ದಳು. ನನ್ನ ಆಕೆಯ ಪ್ರೇಮಾನುಬಂಧ ಅಂದಿಗೆ ಕೊನೆಯಾಗಿತ್ತು. ಏನು ಹೇಳಿದರು ಆಕೆ ನನ್ನ ಮಾತನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ.
 
ಈ ಘಟನೆ ನಡೆದು ಸುಮಾರು ೨ ವರ್ಷಗಳೇ ಕಳೆದುಹೋದವು. ಅಂದಿನಿಂದ ಇಂದಿನವರೆಗೂ ನಾನು ಆಕೆಯನ್ನು ಕಾರಣ ಕೇಳಿಲ್ಲ. ಹೇಳುವ ಮನಸ್ಸೂ ಅವಳಿಗಿಲ್ಲ. ಈ ಹುಡುಗಿಯರು ಯಾವಾಗ ಪ್ರೀತಿ ಮಾಡ್ತಾರೋ, ಯಾವಾಗ ಬೇಡ ಅಂತಾರೋ ಒಂದೂ ತಿಳಿಯುವುದಿಲ್ಲ. ಹಾಗೆಯೇ ಅವರ ಆಟಗಳಿಗೆ ಬಲಿಯಾದ ನನ್ನಂಥಹವರು ಕಡಿಮೆ ಏನೂ ಇಲ್ಲ.

(ಇದು ನನ್ನ ಸ್ನೇಹಿತನೊಬ್ಬನ ಪ್ರೇಮ ಪ್ರಸಂಗದ ಕೊನೆಯ ಭಾಗ)

Thursday, February 5, 2009

ಪ್ರೀತಿ ಅಂದ್ರೆ ಇದೇನಾ...?


ಪ್ರೀತಿ-ಪ್ರೇಮ ಎಂದು ಆರಂಭಗೊಂಡು ೨ ವರ್ಷ ಕಳೆಯುವುದರೊಳಗೆ ವಿಚ್ಚೇದನ ಪಡೆಯುವ ಮಂದಿ ಇರುವ ಈ ಕಾಲದಲ್ಲಿ, ಪತಿಯ ನೆನಪಿಗೋಸ್ಕರ ೬೦ ವರ್ಷಗಳಿಂದ ಹಿಡಿದ ಕಾಯಕವನ್ನು ನಡೆಸಿಕೊಂಡು ಬರುತ್ತಿದ್ದಾರೆ ಎಂದರೆ ಬಹುಷಃ ನಂಬಲಿಕ್ಕಾಗದಿದ್ದರೂ ಇದು ಸತ್ಯ.
ಯಾರಪ್ಪ ಎಂದು ಮೂಗಿನ ಮೇಲೆ ಬೆರಳಿಡುತ್ತಿದ್ದೀರಾ...? ನೂರತ್ತರ ಹರೆಯದಲ್ಲೂ ಬತ್ತದ ಸ್ವಾಭಿಮಾನಿ ವೃದ್ದೆಯೊಬ್ಬರ ಪ್ರೇಮದ ಕಥನ ಇದು!
ಪತಿ ಊರ ಮುಂಭಾಗದಲ್ಲಿರುವ ಒಂದು ಕಟ್ಟೆಯ ಮೇಲೆ ಕುಳಿತಿರುತ್ತಿದ್ದರು, ಯಾವಾಗಲೂ ಅಲ್ಲೇ ಓಡಾಡುತ್ತಿದ್ದರು ಎಂಬ ಕಾರಣಕ್ಕಾಗಿ ಪತಿ ಗತಿಸಿದ ನಂತರ ಅವರ ನೆನಪಿಗಾಗಿ ೬೦ ವರ್ಷಗಳಿಂದ ಅವರು ಕುಳಿತುಕೊಳ್ಳುತ್ತಿದ್ದ, ನಡೆದಾಡುತ್ತಿದ್ದ ಜಾಗವನ್ನು ಪ್ರತಿದಿನ ಸ್ವಚ್ಚವಾಗಿಡುವುದೇ ಈಕೆಯ ಕಾಯಕ!ಈಕೆ ಮಾದಮ್ಮ, ರಾಮನಗರ ಜಿಲ್ಲೆಯ, ಚನ್ನಪಟ್ಟಣ ತಾಲ್ಲೂಕಿನ ಬಿ.ವಿ.ಹಳ್ಳಿ ಎಂಬ ಗ್ರಾಮದವರು.

ಎಲ್ಲರಿಗೂ ಮಾದರಿಯಾಗುವ ವ್ಯಕ್ತಿತ್ವ, ವಯಸ್ಸು ೧೧೦ರಿಂದ ೧೧೫ ಇರಬಹುದು. ಪತಿ ತಿಮ್ಮಯ್ಯ ಮರಣಹೊಂದಿ ೬೦ ವರ್ಷಗಳು ಕಳೆದಿವೆ. ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಇದ್ದಾರೆ.

ಹುಟ್ಟು ಸ್ವಾಭಿಮಾನಿಯಾದ ಈಕೆ, ಇದುವರೆಗೂ ಯಾರಿಂದಲೂ ತನ್ನ ಕೆಲಸವನ್ನು ಮಾಡಿಸಿಕೊಂಡಿಲ್ಲ. ಇದರಲ್ಲೇನು ವಿಶೇಷ ಎಂದೀರಾ? ಕೇವಲ ಪತಿಯ ಮೇಲಿನ ಪ್ರೀತಿಗೋಸ್ಕರ ಈಕೆ ತನ್ನ ಕಾಯಕವನ್ನು ಪ್ರತಿದಿನ ಚಾಚೂ ತಪ್ಪದೆ ನಡೆಸಿಕೊಂಡು ಬರುತ್ತಿದ್ದಾರೆ.

ಪ್ರತಿದಿನ ಈ ಕೆಲಸ ಮಾಡದೇ ಇದ್ದರೆ ಈಕೆಗೆ ಗಂಟಲಲ್ಲಿ ನೀರೂ ಇಳಿಯುವುದಿಲ್ಲ! ಗಂಡ ಕುಳಿತುಕೊಳ್ಳುವಾಗ ಸ್ವಚ್ಚವಾಗಿರಲಿ ಎಂದು ಆರಂಭಗೊಂಡ ಈ ಕಾಯಕ ಗಂಡನ ಮರಣಾನಂತರವೂ ಮುಂದುವರೆಸುತ್ತಿದ್ದೇನೆ ಎನ್ನುತ್ತಾರೆ ಈ ಅಜ್ಜಿ!ಈ ಕಾಯಕವನ್ನು ಮಾಡಲು ಬೇರೆಯವರಿಗೆ ಅವಕಾಶ ನೀಡದ ಈ ಅಜ್ಜಿ, ಸ್ವಚ್ಚ ಮಾಡಲು ಉಪಯೋಗಿಸುವ ಪೊರಕೆಯನ್ನೂ ಸಹ ಬೇರೆಯವರಿಂದ ಪಡೆಯುವುದಿಲ್ಲವಂತೆ!

ಮನೆಯಲ್ಲಿ ನೋಡಿಕೊಳ್ಳುವವರು ಎಲ್ಲಾ ಇದ್ದರೂ, ತನ್ನ ದಿನನಿತ್ಯದ ಕಾಯಕವನ್ನು ತಾನೇ ಮಾಡಿಕೊಳ್ಳುವ ಈಕೆಯ ಉತ್ಸಾಹ ಇನ್ನೂ ಬತ್ತಿಲ್ಲ. ಜನಗಳ ಪ್ರೀತಿಗೆ ಪಾತ್ರವಾಗಿರುವ ಈಕೆಯನ್ನು, ಪಕ್ಕದ ಗ್ರಾಮದ ಜನರೂ ಎಲ್ಲರ ಮನೆ ಮಗಳಂತೆ ನೋಡಿಕೊಳ್ಳುತ್ತಿದ್ದಾರೆ.

ಇನ್ನೊಂದು ವಿಶೇಷವೇನೆಂದರೆ ಪರರ ಹಣ ಈಕೆಗೆ ಪಾಶಕ್ಕೆ ಸಮ! ತನ್ನ ಕಣ್ಣೆದುರಿಗೇ ದುಡ್ಡು ಬಿದ್ದಿದ್ದರೂ ಈಕೆ ತೆಗೆದುಕೊಳ್ಳುವುದಿಲ್ಲ!ಬೇಕೆಂದು ಕೆಲವರು ಈಕೆಯ ಮುಂದೆ ದುಡ್ಡು ಇಟ್ಟರೂ ಈಕೆ ಕಣ್ಣೆತ್ತಿಯೂ ಸಹ ಅದನ್ನು ನೋಡುವುದಿಲ್ಲವಂತೆ. ಇಂಥಹವರೂ ಇದ್ದಾರೆಯೇ!

೧೧೦ ವರ್ಷಗಳಾದರೂ ಈಕೆ ಇದುವರೆಗೂ ಯಾವ ಖಾಯಿಲೆಯಿಂದಲೂ ಬಳಲಿಲ್ಲ ಎಂದರೆ ನಂಬುತ್ತೀರಾ? ಸರಳ ಜೀವನ, ಮಿತ ಆಹಾರ, ಆರೋಗ್ಯಕರ ಜೀವನ ಈಕೆಯ ದೀರ್ಘಾಯಸ್ಸಿನ ಗುಟ್ಟು!ಒಂಟಿ ಜೀವನ ನಡೆಸುತ್ತಿರುವ ಈಕೆಯ ಬದುಕು ಅಂತ್ಯಗೊಳ್ಳುವ ದಿನಗಳು ಹತ್ತಿರವಾಗುತ್ತಿವೆ. ಆದರೂ ಈಕೆಗೆ ತನ್ನ ಗಂಡನ ಮೇಲಿನ ಪ್ರೀತಿ ಬತ್ತಿಲ್ಲ ಎಂದು ಕಾಣುತ್ತಿದೆ.

ಪ್ರೀತಿ ಅಂದ್ರೆ ಇದೇನಾ....?

ಆಟ ಮುಗಿಸಿದ 'ಕೆರೆಮನೆ’




ಯಕ್ಷಗಾನ ರಂಗದ ಸುಖ-ದುಃಖ ಮತ್ತು ಏರಿಳಿತಗಳನ್ನು ಬಾಲ್ಯದಿಂದಲೇ ಅನುಭವಿಸಿಕೊಂಡು, ಪೋಷಿಸಿಕೊಂಡು ಬಂದ ಹಿರಿಯ ಯಕ್ಷಗಾನ ಕಲಾವಿದ, ಕರ್ನಾಟಕ ಯಕ್ಷಗಾನ ಮತ್ತು ಜಾನಪದ ಅಕಾಡಮಿ ಅಧ್ಯಕ್ಷರೂ ಆದ ಕೆರೆಮನೆ ಶಂಭುಹೆಗ್ಗಡೆ ಎಂಬ ಮಹಾನ್ ಚೇತನ ಇನ್ನು ಇತಿಹಾಸದ ಪುಟಗಳಲ್ಲಿ ಮಾತ್ರ!

ಕೇರಳದಲ್ಲಿ ಕಥಕ್ಕಳಿ ನಾಡಿನ ಸಾಂಸ್ಕೃತಿಕ ರಂಗದ ಮಾನ್ಯತೆ ಪಡೆದಿದೆಯೋ ಹಾಗೆಯೇ ಯಕ್ಷಗಾನ ಕರ್ನಾಟಕದಲ್ಲಿ ಅಗ್ರಪಂಕ್ತಿಯ ಕಲೆಯಾಗಿ ಮಾನ್ಯತೆ ಪಡೆಯಬೇಕಾದ ಅಗತ್ಯವಿದೆ ಎಂಬ ತಮ್ಮ ಮಹದಾಸೆಯನ್ನು ಇಟ್ಟುಕೊಂಡಿದ್ದ ಹೆಗಡೆಯವರು, ಅನುಷ್ಟಾನಕ್ಕಾಗಿ ಬಹಳಷ್ಟು ಶ್ರಮಿಸಿದರೂ ಕಡೆಗೂ ಅವರ ಆಸೆ ಈಡೇರಲಿಲ್ಲ.

ಔದ್ಯೋಗಿಕತೆಗೆ ಸಿಕ್ಕಿ ಜಾನಪದ ಕಲಾಪ್ರಕಾರಗಳು ನಾಶವಾಗುತ್ತಿದ್ದು, ಜಾನಪದ ಕಲಾಪ್ರಕಾರಗಳನ್ನು ಉಳಿಸುವ ಕೆಲಸವನ್ನು ಕಲಾವಿದರು, ಪ್ರೇಕ್ಷಕರು ಮಾಡಬೇಕು. ಯಕ್ಷಗಾನ ಕ್ಷೇತ್ರಕ್ಕೆ ತಮ್ಮಿಂದ ಒಳ್ಳೆಯದಾಗಿದೆಯೋ ಇಲ್ಲವೋ, ಕೆಟ್ಟದಂತೂ ಆಗಬಾರದು ಎನ್ನುವ ಕಳಿಕಳಿ ಹೊಂದಿದ್ದ ಅವರು, ಇತ್ತೀಚಿನ ದಿನಗಳಲ್ಲಿ ಯಕ್ಷಗಾನ ಹಾಗೂ ರಂಗಭೂಮಿ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿರುವ ಬಗ್ಗೆ ವಿಷಾಧ ವ್ಯಕ್ತಪಡಿಸುತ್ತಿದ್ದರು.

ಯಕ್ಷಗಾನ ಕಲೆ, ಪೋಷಣೆ ಹಾಗೂ ಅಭಿವೃದ್ದಿಗೆ ಆದ್ಯತೆ ನೀಡಲು ಪ್ರತ್ಯೇಕ ಅಕಾಡೆಮಿ ಸ್ಥಾಪನೆಯಾಗಬೇಕೆನ್ನುತ್ತಿದ್ದ ಅವರು, ಜಾನಪದ ಕ್ಷೇತ್ರವು ಅತ್ಯಂತ ವಿಸ್ತಾರವಾಗಿರುವುದರಿಂದ ಒಂದೇ ಅಕಾಡೆಮಿಯಿಂದ ಎರಡು ಸಂಗತಿಗಳಿಗೂ ನ್ಯಾಯ ಸಿಗಲಾರದು ಎಂಬ ಅಭಿಪ್ರಾಯ ಹೊಂದಿದ್ದರು.

ಯಕ್ಷಗಾನ ಕಲಾಕೇಂದ್ರ ಸ್ಥಾಪಿಸಿ, ಸಂಚಾರಿ ಮೇಳ ರೂಪಿಸಿ ಕಲೆಯ ಋಣ ತೀರಿಸುತ್ತಾ, ರಕ್ಷಣೆಯ ಕೆಲಸವನ್ನು ಮಾಡಿಕೊಂಡು ಬಂದಿದ್ದ ಕೆರೆಮನೆ ಶಂಭುಹೆಗ್ಗಡೆಯವರು, ತಮ್ಮ ಪುತ್ರ ಶಿವಾನಂದ ಹೆಗಡೆಯವರನ್ನು ಸಹ ಈ ಕ್ಷೇತ್ರಕ್ಕೆ ಕರೆತಂದು, ತಮ್ಮ ಮುಂದಿನ ಪೀಳಿಗೆಯೂ ಸಹ ಯಕ್ಷಗಾನ ಕಲೆಯನ್ನು ಮುಂದುವರಿಸುವ ಜವಾಬ್ದಾರಿಯನ್ನು ಹೊರಿಸಿದ್ದಾರೆ.

ತಮ್ಮ ಕುಟುಂಬದ ಮಕ್ಕಳು, ಮೊಮ್ಮಕ್ಕಳು ಎಲ್ಲರನ್ನೂ ಕಲಾವಿರನ್ನಾಗಿ ರೂಪಿಸಿದ ಶಂಭುಹೆಗ್ಗಡೆಯವರು, ತಮ್ಮ ಇಳಿ ವಯಸ್ಸಿನಲ್ಲೂ ತಮ್ಮ ಕಲಾ ಪ್ರೇಮ ಬಿಟ್ಟಿರಲಿಲ್ಲ.

ಒಂದು ಕಾಲದಲ್ಲಿ ಅನಕ್ಷರಸ್ತ ಸಮುದಾಯವನ್ನು ಕಲೆಯ ಮೂಲಕ ಪೌರಾಣಿಕ ಕಥೆಗಳನ್ನು ತಲುಪಿಸಿದ ಸಾಧನೆಯನ್ನು ಯಕ್ಷಗಾನ ಕಲಾವಿದರು ಮಾಡಿದ್ದಾರೆ. ಯಕ್ಷಗಾನದಲ್ಲಿ ಮಾತು, ಅಭಿನಯಕ್ಕೆ ಪ್ರಾಮುಖ್ಯತೆ ಇದೆ. ಇಲ್ಲಿ ಒಂದು ಪಾತ್ರಕ್ಕೆ ವೈಚಾರಿಕ ನೆಲೆಗಟ್ಟನ್ನು ಒದಗಿಸಿಕೊಟ್ಟವರು ಮಾತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ ಕಲಾವಿದರು, ಅವರ ಪ್ರಭಾವ ಉಳಿದ ವೇಷಧಾರಿಗಳ ಮೇಲೂ ಇದೆ ಎಂದು ಹೆಗಡೆ ಅಭಿಪ್ರಾಯಿಸುತ್ತಿದ್ದರು.

ಜಾನಪದ ಕಲೆ ಹಾಗೂ ಸಾಹಿತ್ಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಪದವಿ ಮಟ್ಟದ ಪಠ್ಯದಲ್ಲೂ ಈ ವಿಷಯವನ್ನು ಸೇರ್ಪಡೆ ಮಾಡಬೇಕು ಎಂದು ಸರ್ಕಾರಕ್ಕೂ ಸಲಹೆ ಮಾಡಿದ್ದರು.ಅಗಲಿದ ಈ ಮಹಾನ್ ಚೇತನಕ್ಕೆ ಅನೇಕ ಪುರಸ್ಕಾರಗಳು, ಪ್ರಶಸ್ತಿಗಳು ಸಂದಿದ್ದು, ಸನ್ಮಾನಗಳಿಗಂತೂ ಲೆಕ್ಕವೇ ಇರಲಿಲ್ಲ.

ಯಕ್ಷಗಾನದಲ್ಲಿ ಆಸಕ್ತಿ ಇರುವ ಕಲಾವಿದರಿಗಾಗಿ ಜಿ.ಎಸ್. ಭಟ್ ಅವರು ಕೆರೆಮನೆ ಶಂಭುಹೆಗ್ಗಡೆ ಅಧ್ಯಯನ ಗ್ರಂಥವನ್ನೂ ಸಹ ರಚಿಸಿದ್ದಾರೆ. ಇದರಲ್ಲಿ ಹೆಗ್ಡೆಯವರ ಯಕ್ಷಗಾನ ಲೋಕದ ಸಾಧನೆಯನ್ನು ಬಣ್ಣಿಸಲಾಗಿದೆ.

ಯಕ್ಷಗಾನಕ್ಕೆ ಸಂಬಂಧಿಸಿದಂತೆ ಅನೇಕ ಸಂಶೋಧನೆಗಳು ನಡೆದಿವೆ. ಇದನ್ನು ಮಹತ್ವದ ಕಲಾ ಪರಂಪರೆ ಎಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಆಟ ನೋಡುವುದಿಲ್ಲ ಏಕೆ? ಎನ್ನುತ್ತಿದ್ದ ಹೆಗಡೆಯವರು, ಯಕ್ಷಗಾನ ಕಲಾಪ್ರಕಾರಕ್ಕೆ ಶೈಕ್ಷಣಿಕ ವ್ಯವಸ್ಥೆಯನ್ನು ರೂಪಿಸುವ ಅಗತ್ಯವಿದೆ ಎಂದು ಪ್ರತಿಪಾದಿಸುತ್ತಿದ್ದರು.

ಒಟ್ಟಾರೆ ಒಬ್ಬ ಮಹಾನ್ ಯಕ್ಷಗಾನ, ರಂಗಭೂಮಿ ಕಲಾವಿದರೊಬ್ಬರನ್ನು ನಮ್ಮ ಸಾಂಸ್ಕೃತಿಕ ನಾಡು ಕಳೆದುಕೊಂಡಿದೆ. ಇದನ್ನು ಉಳಿಸಲು, ಬೆಳೆಸಲು ಮತ್ತೊಬ್ಬ ಶಂಭುಹೆಗ್ಗಡೆ ಹುಟ್ಟಿ ಬರುವರೇ? ಕಾದುನೋಡಬೇಕಾಗಿದೆ.

ಅಗಲಿದ ಚೇತನಕ್ಕೆ ನಮನ ಸಲ್ಲಿಸುತ್ತಾ, ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಪ್ರಾರ್ಥಿಸೋಣ.

Friday, January 23, 2009

18ನೇ ಶತಮಾನಕ್ಕೆ ಹೋಗಬೇಕೆ!? ಹಾಗಾದ್ರೆ ಬನ್ನಿ

KALLINA RATHA
ಇಂದಿನ ಬೆಂಗಳೂರಿನ ಆ ವಾಯುಮಾಲಿನ್ಯದಿಂದಾಗಿ, ಆ ವಾಹನಗಳ ಶಬ್ದಗಳ ಕಿರಿಕಿರಿಯಿಂದಾಗಿ ಬೇಸತ್ತಿದ್ದೀರಾ?ಬೆಂಗಳೂರು ಎಂಬ ಮಾಯೆಯ ಮಹಾನಗರಿಯನ್ನು ಬಿಟ್ಟು, ಸ್ವಲ್ಪ ಸಮಯ ರಿಲ್ಯಾಕ್ಸ ಪಡೆದು, ೧೮ನೇ ಶತಮಾನಕ್ಕೆ ಹೋಗೋಣ ಬನ್ನಿ...!

ಬೆಂಗಳೂರಿನಿಂದ ಮೈಸೂರು ಕಡೆಗೆ ಕೇವಲ ೪೫ ಕಿ.ಮೀ.ಯಲ್ಲಿ ನಿಮಗೆ ಸಿಗುತ್ತದೆ ೧೮ನೇ ಶತಮಾನದ ಚಿತ್ರಣ! ನಿಜ ಕಣ್ರೀ... ಹೆದ್ದಾರಿಯಲ್ಲೇ ಜಾನಪದ ಲೋಕ ಎಂಬ ಒಂದು ಪ್ರಾಚೀನ ಇತಿಹಾಸವನ್ನು ನೆನಪಿಸುವ ಒಂದು ತಾಣ ಇದೆ.

ದಿನನಿತ್ಯದ ಜಂಜಾಟವನ್ನೆಲ್ಲಾ ಮರೆತು, ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ, ಒಂದು ಸಲ ಇಲ್ಲಿಗೆ ಬರಲೇ ಬೇಕು ಕಣ್ರೀ. ಇಲ್ಲಿ ಅಂಥದ್ದೇನಿದೆ ಅಂತೀರಾ...?

ನಿಮ್ಮ ಊಹೆಗೂ ನಿಲುಕದಷ್ಟು ಸಂಗತಿಗಳು ಇಲ್ಲಿ ಸಿಗುತ್ತವೆ. ಹೆಬ್ಬಾಗಿಲಿನಲ್ಲೇ ನಿಮಗೆ ನಮ್ಮ ಪ್ರಾಚೀನ ಗತಕಾಲದ ನೆನಪಾಗುತ್ತದೆ.ಒಳಗೆ ಪ್ರವೇಶ ಮಾಡುತ್ತಿದ್ದಂತೆ ಗಾದೆಗಳ ಬರವಣಿಗೆ ನಿಮ್ಮನ್ನು ಸ್ವಾಗತಿಸುತ್ತವೆ.

ಮುಂದಡಿ ಇಡುತ್ತಿದ್ದಂತೆ ನಿಮಗೆ ೧೮ನೇ ಶತಮಾನದ ಅನುಭವ ಆಗಲು ನಿಮಗೆ ಸಾಕಷ್ಟು ಸಮಯ ಬೇಕಾಗುವುದಿಲ್ಲ ಅನಿಸುತ್ತದೆ.

ಮಾರ್ಗದುದ್ದಕ್ಕೂ ತೆಂಗಿನ ಮರಗಳ ಸಾಲು, ಪಕ್ಕದಲ್ಲೇ ಉದ್ಯಾನ, ಅಲ್ಲಲ್ಲಿ ಓಡಾಡುವ ಬಾತುಕೋಳಿಗಳು, ಮರದ ಮೇಲಿಂದಲೇ ನಿಮ್ಮನ್ನು ಸ್ವಾಗತಿಸುವ ವಾನರ ಗುಂಪು, ಆ ಪಕ್ಷಿಗಳ ಚಿಲಿಪಿಲಿ ಕಲರವ, ನಿಜಕ್ಕೂ ಇಂಥಾ ಒಂದು ಅದ್ಭುತ ಲೋಕ ಇನ್ನೂ ಉಳಿದಿದೆಯೇ ಎಂದು ನಿಮಗೆ ಅನ್ನಿಸದೇ ಇರದು!

ಗತಕಾಲದ ಇತಿಹಾಸ ಸಾರುವ ಪಳೆಯುಳಿಕೆಗಳು, ವಸ್ತುಗಳು, ದೇವಾಲಯಗಳು, ಉದ್ಯಾನವನಗಳು, ಕಲಾಕೃತಿಗಳು, ಹಳೆಯ ರಥಗಳು, ಗ್ರಂಥಗಳು, ಲೋಕಮಹಲ್, ವಸ್ತು ಸಂಗ್ರಹಾಲಯ, ಗಿಡ ಮೂಲಿಕೆಗಳು, ಹಂಸವಿಹಾರ, ಕೆರೆ, ಕಾಡು ಹೀಗೆ ಎಲ್ಲಾ ಇಲ್ಲಿ ಕಾಣಸಿಗುತ್ತವೆ.

ಮುಖ್ಯವಾಗಿ ಕ್ರಿ.ಶ.೧೧೫೦ ವರ್ಷಗಳದ್ದು ಎನ್ನಲಾದ ವಿಗ್ರಹಗಳು, ಶಿಲಾಶಾಸನಗಳು, ವೀರಗಲ್ಲು, ಮಾಸ್ತಿಕಲ್ಲುಗಳು, ೧೪-೧೫ನೇ ಶತಮಾನದ ಕಲ್ಲಿನಿಂದ ಕೆತ್ತಲ್ಪಟ್ಟಿರುವ ದೇವರ ವಿಗ್ರಹಗಳು ಇಲ್ಲಿನ ಆಕರ್ಷಣೀಯವಾಗಿವೆ.

ಒಳಗೆ ಹೋದರೆ ನಿಮಗೆ ಅಲ್ಲಿಂದ ಬರಲು ಮನಸೇ ಆಗುವುದಿಲ್ಲ ಎಂಬ ಅನಿಸಿಕೆ ನನ್ನದು.ಬರೆಯಲು ಸಾದ್ಯವಾಗದಷ್ಟು ವಿಸ್ಮಯಗಳು ಇಲ್ಲಿವೆ. ವಿಹರಿಸಿ, ಸಕಾದಾಗ ಅಲ್ಲಿ ಕೂಲಾಗಿ ಕುಳಿತು, ಊಟ ಮಾಡಲು ಪ್ರಸಿದ್ದ ಕಾಮತ್ ಲೋಕರುಚಿ ಭೋಜನಶಾಲೆಯೂ ಸಹ ಇದೆ.

ಬನ್ನಿ ಸ್ವಲ್ಪ ಸಮಯ ನಮ್ಮ ಜಾಗವನ್ನು ಬಿಟ್ಟು ಜಾನಪದ ಲೋಕಕ್ಕೆ ಹೋಗಿ ಬರೋಣ. ನಮ್ಮ್ ಮನವನ್ನು ಸಂತೋಷಪಡಿಸೋಣ. ಬರ್ತೀರಿ ತಾನೆ?

ಇಷ್ಟಾರ್ಥ ಈಡೇರಿಸುವ ಬಸವ!


ನೀವು ನೆನೆದುಕೊಂಡಂತೆ ಆಗಬೇಕೆ?, ನಿಮಗೆ ಪ್ರೊಮೋಷನ್ ಬೇಕೆ?, ಕುಟುಂಬದಲ್ಲಿ ಶಾಂತಿ ನೆಲೆಸಬೇಕೆ?, ನಿಮ್ಮ ತೊಂದರೆ ಪರಿಹಾರವಾಗಬೇಕೆ?, ಸಂತಾನಭಾಗ್ಯ ಬೇಕೆ?, ನಿಮ್ಮ ಎಲ್ಲಾ ದೋಷ ಕಳೆಯಬೇಕೆ?...ಹಾಗಾದ್ರೆ ಯಾಕೆ ತಡ? ಬನ್ನಿ ನಮ್ಮ ಬಸವನ ಬಳಿಗೆ...!!!ಎಲ್ಲಿದೆ ಅಂತ ಕೇಳ್ತಾಇದೀರಾ? ಮಾಯಾನಗರಿಯೆಂಬ ಬೆಂಗಳೂರಿನಿಂದ ಕೆಲವೇ ಕಿ.ಮೀ.ಗಳ ದೂರದಲ್ಲೇ ಇದೆ ಈ ಬಸವನ ವಾಸ್ತವ್ಯ. ಕಲಿಯುಗದ ನಿಜದೇವರು ಎಂದೇ ಬಿಂಬಿತವಾಗಿರುವ ಈ ಬಸವ ಮಂಡ್ಯ ಜಿಲ್ಲೆಯಲ್ಲಿದೆ.ಆಶ್ಚರ್ಯ ಆದರೂ ನಿಜ ಕಣ್ರೀ. ನಿಮ್ಮ ಎಲ್ಲಾ ಕೋರಿಕೆಗಳನ್ನೂ ಈಡೇರಿಸಲು ಈ ಬಸವನ ಜನನ ಆಗಿದೆ ಎಂದೇ ಹೇಳುತ್ತಾರೆ ಈ ಭಾಗದ ಜನ! ಅದು ನಿಜವೂ ಕೂಡಾ.ಹಾಗಾದ್ರೆ ಬನ್ನಿ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಚಿಕ್ಕರಸಿನಕೆರೆ ಗ್ರಾಮಕ್ಕೆ. ಚಿಕ್ಕರಸಿನಕೆರೆಯ ಶ್ರೀ ಕಾಲಭ್ಯರವೇಶ್ವರನ ದೇವಾಲಯಕ್ಕೆ. ಇಲ್ಲೇ ಇರುವುದು ಈ ಬಸವ.ಜಗತ್ತಿನಲ್ಲಿ ನಾನಾ ವಿಸ್ಮಯಗಳನ್ನು ಸೃಷ್ಟಿಸುತ್ತಿರುವ ಮಾನವನಿಂದ ಅಸಾಧ್ಯವಾದ ಕೆಲಸವನ್ನು ಸಾಮಾನ್ಯವಾದ ದನ(ಹಸು) ಮಾಡುತ್ತದೆಯೇ ಎಂದು ಯೋಚಿಸಬೇಡಿ. ಈ ಬಸವ ಎಲ್ಲಾ ದನಗಳ ಹಾಗಲ್ಲ, ಇದಕ್ಕೆ ತನ್ನದೇ ಆದ ಕೆಲವು ವಿಶಿಷ್ಟತೆಗಳು, ಆಚರಣೆಗಳು ಇವೆ.ಈ ಬಸವನ ದರ್ಶನ ಭಾಗ್ಯ ದೊರೆಯುವುದೇ ಪುಣ್ಯ ಕಣ್ರೀ. ಆ ದೇವಾಲಯದ ಬಳಿ ಈ ಬಸವನನ್ನು ನೋಡಲು ಇಡೀ ರಾಜ್ಯದಿಂದಷ್ಟೇ ಅಲ್ಲ, ದೇಶ, ವಿದೇಶಗಳಿಂದಲೂ ಸಹ ಭಕ್ತರು ಆಗಮಿಸುತ್ತಾರೆ.ಇಡೀ ಮಂಡ್ಯ ಜಿಲ್ಲೆಯ ಜನತೆ ಈ ಬಸವನನ್ನು ತಮ್ಮ ಮನೆದೇವರನ್ನಾಗಿ ಮಾಡಿಕೊಂಡಿದ್ದಾರೆ. ಹಾಗೆಯೇ ಈ ಬಸವನೂ ಸಹ ಅವರ ಕಷ್ಟ-ಸುಖಗಳಲ್ಲಿ ಭಾಗಿಯಾಗಿದ್ದಾನೆ. ಈ ಬಸವ ದೇವರ ತದ್ರೂಪು ಎಂದೇ ಜನ ಭಾವಿಸಿ, ಇದನ್ನೇ ನಂಬಿದ್ದಾರೆ. ತಮ್ಮ ಯಾವುದೇ ಕೆಲಸಗಳನ್ನು ಪ್ರಾರಂಭಿಸಲು, ಕಷ್ಟ ನಿವಾರಿಸಿಕೊಳ್ಳಲು ಈ ಬಸವನ ಬಳಿಗೆ ಬರುವ ಜನ, ಹಿಂತಿರುಗಿ ಹೋಗುವಾಗ ನಿರಾಸೆಯಿಂದ ಹೋಗುವುದನ್ನು ಯಾರೂ ಕಂಡಿಲ್ಲವಂತೆ.ಸುಮಾರು ೩೦ ವರ್ಷಗಳಿಂದ ಈ ಬಸವ ಇಲ್ಲಿಯ ಜನರ ಕಷ್ಟ-ಸುಖಗಳಿಗೆ ಸ್ಪಂದಿಸುತ್ತಿದ್ದು, ಈ ಬಸವ ಇರುವ ಈ ತಾಣದಲ್ಲಿ ಇಲ್ಲಿಯವರೆಗೂ ಬರಗಾಲವೇ ಬಂದಿಲ್ಲವಂತೆ! ಸುಂದರ ಪ್ರಕೃತಿಯ ಮಡಿಲಿನಲ್ಲಿ, ಮಲೆನಾಡನ್ನೇ ನಾಚಿಸುವಂತೆ ಇಡೀ ಜಿಲ್ಲೆಯನ್ನೇ ಸಂಪದ್ಭರಿತವಾಗಿ ಇಟ್ಟಿರುವ, ಜನರನ್ನು ಕಾಯುತ್ತಿರುವ ಈ ಬಸವ ಈ ಭಾಗದ ಜನರಿಗೆ ಸುಪ್ರೀಮ್ ಕೋರ್ಟ್ ಆಗಿರುವುದು ವಿಶೇಷ.ಈ ಭಾಗದಲ್ಲಿ ಎಲ್ಲಾದರೂ ಕಳ್ಳತನ, ದರೋಡೆ ಮುಂತಾದವುಗಳು ನಡೆದರೆ, ಕಳ್ಳರನ್ನು ಹಿಡಿಯುವ ಕೆಲಸ ಬಸವನದಂತೆ! ಆ ಕಳ್ಳ ಯಾವುದೇ ಗವಿಯಲ್ಲಿ ಅವಿತಿರಲಿ, ಅವನನ್ನು ಶಿಕ್ಷಿಸುವುದು ಬಸವನ ಕೆಲಸ! ಹಾಗಾಗಿ ಈ ಭಾಗದಲ್ಲಿ ಬಸವನಿಗೆ ಹೆದರಿ ಕಳ್ಳರು ಕಾಲ್ಕಿತ್ತಿದ್ದಾರಂತೆ!ಹಾಗೆಯೇ ಈ ಬಸವ ಸುಮ್ಮನೆ ಬಿಟ್ಟಿ ಕೆಲಸ ಮಾಡಿಕೊಡುವುದಿಲ್ಲ! ಅದಕ್ಕೆ ದಕ್ಷಿಣೆಯನ್ನು ಕೊಡಲೇಬೇಕು. ಇಲ್ಲದಿದ್ದರೆ ನಿಮ್ಮ ಕೆಲಸ ಪೆಂಡಿಂಗ್. ಮೋಸ ಮಾಡುವುದು ಇಲ್ಲಿ ನಡೆಯುವುದಿಲ್ಲ. ಮೋಸಗಾರರ ಬಗ್ಗೆ ಇದಕ್ಕೆ ಮೊದಲೇ ಮಾಹಿತಿ ಸಿಕ್ಕಿರುತ್ತದೆ ಹುಷಾರ್!ಹಾಗಾಗಿ ನಿಮ್ಮ ಕೆಲಸಕ್ಕೆ ತಕ್ಕಂತೆ ದಕ್ಷಿಣೆ ನೀಡಲೇಬೇಕು. ಇಂತಿಷ್ಟು ಅಂತಲ್ಲ, ಕಡಿಮೆಯನ್ನೂ ತೆಗೆದುಕೊಳ್ಳುವುದಿಲ್ಲ. ಕೊಡದಿದ್ದರೆ ನಿಮ್ಮ ಮನೆಗೇ ಬಂದೀತು ಜೋಕೆ! ನೀವು ಕೊಡುವವರೆಗೂ ನಿಮ್ಮ ಮನೆ ಬಿಟ್ಟು ಜಗ್ಗುವುದಿಲ್ಲ.ಯಾರೇ ಆಗಲಿ, ಈ ಬಸವನ ಮುಂದೆ ಎಲ್ಲರೂ ಒಂದೆ. ಎಲ್ಲರಿಗೂ ಒಂದೇ ದರ್ಶನ. ಬಡವರಿಗಾಗಲೀ, ಶ್ರೀಮಂತರಿಗಾಗಲೀ, ದೇಶದ ಪ್ರಧಾನಮಂತ್ರಿಗಾಗಲೀ ಯಾರೇ ಬಂದರೂ ಅದಕ್ಕಾಗಿ ಕಾಯಲೇಬೇಕು... ಇದು ಇದರ ನಿಯಮ!ಒಟ್ಟಿನಲ್ಲಿ ಬಸವ ಜನರನ್ನು ಕಾಪಾಡುತ್ತಿರುವುದಂತೂ ಸತ್ಯ. ಒಮ್ಮೆ ಈ ಬಸವನ ದೇವಾಲಯಕ್ಕೆ ಹೋಗಿ ಬಂದಾಗಲೇ ಇದರ ಮಹತ್ವ ತಿಳಿಯುವುದು. ಹಾಗಾಗಿ ಒಮ್ಮೆ ನಿಮ್ಮ ಕಷ್ಟ ಹೇಳಿಕೊಳೋಕೆ ಹೋಗ್ತೀರಿ ತಾನೇ?

ಬರಿದಾದ ನದಿ-ಕೆರೆ, ಮಳೆರಾಯನಿಗೆ ಕೇಳಿಸದೇ ಮೊರೆ?


ಅದೊಂದು ದೊಡ್ಡಕೆರೆ, ಸುಮಾರು ೧೦ ಸಾವಿರ ಎಕರೆ ಪ್ರದೇಶದಲ್ಲಿ ತನ್ನನ್ನು ಆವರಿಸಿಕೊಂಡಿದೆ. ಸುತ್ತಲೂ ದೊಡ್ಡ ಏರಿ, ಅಲ್ಲಲ್ಲಿ ನೀರು ಹೊರಹೋಗಲು ನಿರ್ಮಿಸಿರುವ ತೂಬುಗಳು, ಕಣ್ಣಾಯಿಸಿದಷ್ಟೂ ದೂರ ಕಾಣುವ ನೀರು, ಅದೆಷ್ಟೋ ದೂರದಲ್ಲಿ ಚಿಕ್ಕದಾಗಿ ಕಾಣುವ ಕೆರೆಯ ದಡ, ಅಲ್ಲೇ ಸಾಲುಗಟ್ಟಿ ನಿಂತಿರುವ ತೆಂಗಿನಮರಗಳು, ಹಿಂದೆಯೇ ಚಿಕ್ಕದಾಗಿ ಕಾಣುವ ದೊಡ್ಡ ದೊಡ್ಡ ಬೆಟ್ಟ-ಗುಡ್ಡಗಳು, ಆಗಸ ಇಲ್ಲೇ ಎಲ್ಲೋ ಹತ್ತಿರದಲ್ಲಿ ಕೊನೆಯಾಗಿದೆಯೇನೋ ಎನ್ನುವ ಅನುಭವ!

ಎಷ್ಟೊಂದು ಸುಂದರ, ವರ್ಣಿಸಲಸಾಧ್ಯ ಅಲ್ಲ್ಲವೇ? ಒಮ್ಮೆ ನಮ್ಮ ಕ್ಯಾಮರಾದೊಳಗೆ ಸೆರೆಸಿಕ್ಕಿಸಿಕೊಳ್ಳೋಣ ಎಂದುಕೊಂಡರೆ ನೀವು ೧೦ ವರ್ಷ ಹಿಂದಕ್ಕೆ ಹೋಗಬೇಕಾಗುತ್ತದೆ ಜೋಕೆ!ನಿಜ, ಅದೇ ದೊಡ್ಡಕೆರೆ ಇಂದು ನೀರಿಲ್ಲದೆ ಸೊರಗಿದೆ, ಹೂಳುತುಂಬಿಕೊಂಡು, ಕೆರೆಯೆಲ್ಲಾ ನುಂಗಣ್ಣರ ಹಾವಳಿಗೆ ತುತ್ತಾಗಿ ಬೇಸಾಯ ಭೂಮಿಯಾಗಿ ಮಾರ್ಪಾಟಾಗಿದೆ, ಕೆರೆ ಕೇವಲ ಕೆಲವೇ ಎಕರೆ ಪ್ರದೇಶವನ್ನು ತನ್ನದಾಗಿಸಿಕೊಂಡಿದೆ, ದಡದಲ್ಲಿ ಕಾಣುತ್ತಿದ್ದ ತೆಂಗಿನಮರಗಳು, ಬೆಟ್ಟಗುಡ್ಡಗಳು ಪಕ್ಕದಲ್ಲಿಯೇ ಇದೆಯಲ್ಲಾ ಎನ್ನುವಂತೆ ಭಾಸ! ಇದು ವಾಸ್ತವ.

ಬೆಳಗಾದೊಡನೆ ತನ್ನಿರುವಿಕೆಯ ಬಳಿ ಈಜಾಡಲು ಆಗಮಿಸುತ್ತಿದ್ದ ಹಳ್ಳಿಯ ಮಕ್ಕಳು, ಪಾತ್ರೆ-ಬಟ್ಟೆ ತೊಳೆಯಲು ಆಗಮಿಸುತ್ತಿದ್ದ ಹೆಂಗೆಳೆಯರು, ದನ-ಕರುಗಳನ್ನು ಸ್ವಚ್ಚಗೊಳಿಸಲು ಬರುತ್ತಿದ್ದ ಜನ, ತನ್ನ ವ್ಯಾಪ್ತಿಯ ಸಾವಿರಾರು ಎಕರೆ ಪ್ರದೇಶಕ್ಕೆ ಬೇಸಾಯಕ್ಕೆ ನೀರುಣಿಸುವ ಸಲುವಾಗಿ ಆಗಮಿಸುತ್ತಿದ್ದ ರೈತಾಪಿ ವರ್ಗ ಇವೆಲ್ಲಾ ನೆನಪುಗಳಲ್ಲಿ ಕಾಲಕಳೆಯುತ್ತಾ, ದಶಕಗಳ ಹಿಂದೆ ಪಕ್ಕದಲ್ಲಿಯೇ ಇದ್ದ ಹತ್ತಾರು ಹಳ್ಳಿಗಳ ಮಣ್ಣಿನಮಕ್ಕಳ ಹಿತ ಕಾದಿದ್ದ, ದಿನನಿತ್ಯದ ಬದುಕಿಗೆ ಆಸರೆಯಾಗಿದ್ದ ಕೆರೆ ಇಂದು ಮೂಕರೋಧನೆ ಅನುಭವಿಸುತ್ತಿದೆ.

ಬೇಸಾಯವನ್ನು ಬಿಟ್ಟು ಸೂರ್ಯ ಕಣ್ಣು ಬಿಡುವ ಮೊದಲೇ ತಮ್ಮ ಕೆಲಸ-ಕಾರ್ಯಗಳಿಗಾಗಿ ಪಟ್ಟಣದ ಕಡೆ ಧಾವಿಸುವ ಜನ, ಕೆರೆಗೂ ನಮಗೂ ಸಂಬಂಧವೇ ಇಲ್ಲ ಎನ್ನುವಂತೆ ಮನೆಯ ಬಳಿಯೇ ತಮ್ಮ ದಿನನಿತ್ಯದ ಕಾಯಕದಲ್ಲಿ ತೊಡಗುವ ಹೆಂಗೆಳೆಯರು, ಈಜಾಡುವುದನ್ನೇ ಮರೆತ ಮಕ್ಕಳು...

ವಿಪರ್ಯಾಸ ಅಲ್ಲವೇ? ಕಾಲ ಮುಂದಕ್ಕೆ ಹೋದಂತೆ ಅನೇಕ ಬದಲಾವಣೆಗಳಾಗುತ್ತಿವೆ, ಜಗತ್ತು ಅಭಿವೃದ್ದಿಪಥದತ್ತ ಸಾಗುತ್ತಿದೆ ನಿಜ, ಆದರೆ ಈ ಪ್ರಕೃತಿ ಸೊಬಗು? ನಮ್ಮನ್ನು ಬಿಟ್ಟು ಬಹುದೂರ ಹೋಗುತ್ತಿದೆ!ಏನಾದರೊಂದು ಪಡೆಯಲು ಇನ್ನೊಂದು ಕಳೆದುಕೊಳ್ಳಬೇಕು ಎನ್ನುವ ಮಾತು ಇಲ್ಲಿ ನಿಜ ಎನಿಸುತ್ತದೆ. ಇಲ್ಲಿ ಕೆರೆಯೊಂದೇ ಪ್ರಕೃತಿಯ ಸುಂದರ ಅನುಭವ ನೀಡುತ್ತದೆ ಎಂದಲ್ಲ, ಪ್ರಕೃತಿಯ ಎಲ್ಲಾ ಅನುಭವಗಳಿಂದಲೂ ನಾವು ವಂಚಿತರಾಗುತ್ತಿದ್ದೇವೆ.

ಏಕೆ ಹೀಗಾಯ್ತು ಎಂದು ಯೋಚಿಸುವ ಮೊದಲು ನಮ್ಮಲೇ ಒಂದು ಅತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.ಆ ದಿನಗಳಲ್ಲಿ ಚೆನ್ನಾಗಿ ಮಳೆಯಾಗುತ್ತಿತ್ತು, ಕಾಲಕಾಲಕ್ಕೆ ಮಳೆಯಾಗುತ್ತಿದ್ದರಿಂದ ಕೆರೆ-ಕಟ್ಟೆಗಳು ತುಂಬಿ, ಸಮೃದ್ದಿಯಾಗಿ ಮುಂದಿನ ವರ್ಷದವರೆಗೆ ರೈತರನ್ನು ಕಾಯುತ್ತಿತ್ತು.

ಆದರೆ ಈಗ? ಮಳೆಯಾಗಲು ಮಳೆಗಾಲವೇ ಬೇಕಾಗಿಲ್ಲ, ಯಾವ ಕಾಲವಾದರೂ ಸೈ. ಜಗತ್ತು ವೇಗವಾಗಿ ಓಡುತ್ತಿದೆ, ಇದರಿಂದ ಮಳೆಯೂ ಹೊರತಾಗಿಲ್ಲ, ಮಳೆಗಾಲ ಶುರುವಾಗಿ ೧೫ ದಿನಗಳಲ್ಲೇ ಕರೆ-ಕಟ್ಟೆಗಳು ಭರ್ತಿ! ಮುಂದಿನ ದಿನಗಳಲ್ಲಿ ಮುಳುಗಡೆ, ಪ್ರವಾಹ.... ಹೀಗೆ ಅನಾವೃಷ್ಟಿಯದ್ದೇ ಕಾರುಬಾರು. ಅಲ್ಲದೇ ಜಾಗತೀಕರಣದ ಬಿಸಿ ಪ್ರಕೃತಿಯ ಮೇಲೂ ತಟ್ಟಿದ್ದು, ಅದರ ಪರಿಣಾಮವನ್ನು ನಾವು ಇಂದು ಎದುರಿಸುತ್ತಿದ್ದೇವೆ.

ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ವಿಪರೀತವಾಗಿ ಬಳಸಿಕೊಂಡ ಮಾನವ, ಇಂದು ಅದಕ್ಕೆ ಬೆಲೆತೆರುತ್ತಿದ್ದಾನೆ ಎಂದರೆ ತಪ್ಪಾಗಲಾರದು. ಮಳೆಗೆ ಮೂಲ ಆಸರೆಯಾದ ಅರಣ್ಯಗಳನ್ನು ನಾಶ ಮಾಡಿದ, ಅದರಿಂದಾಗಿ ಈಗ ಮಳೆಯ ಆಗಮನವೇ ಅಪರೂಪವಾಗಿದೆ.

ಮಳೆ ಬಿದ್ದರೂ ಅದರ ರುದ್ರನರ್ತನಕ್ಕೆ ಬಲಿಯಾದವರ ಸಂಖ್ಯೆ ಅದೆಷ್ಟೋ? ಇದರಿಂದ ಪಾರಾಗಲು ಗಿಡ ನೆಡಲು ರೂಪಿಸಿದ ವನಮಹೋತ್ಸವ ಕಾರ್ಯಕ್ರಮ ಕಾಟಾಚಾರಕ್ಕೆ ಎನ್ನುವಂತಾಗಿದೆ.ಒಟ್ಟಾರೆ ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮಳೆಯ ಒರತೆಗಳಾದ ಕೆರೆ-ಕಟ್ಟೆಗಳು ಹೇಳಹೆಸರಿಲ್ಲದಂತಾಗಿ, ಮುಂದಿನ ದಿನಗಳಲ್ಲಿ ಚಿತ್ರಗಳಲ್ಲಿ ಮಾತ್ರ ಅವುಗಳ ಸೊಬಗನ್ನು ವೀಕ್ಷಿಸಬೇಕಾದ ಅನಿವಾರ್ಯತೆ ನಮಗೆ ಎದುರಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಹಾಗಾಗಿ ಮುಂದಿನ ದಿನಗಳಲ್ಲಾದರೂ ಅರಣ್ಯಗಳನ್ನು ಬೆಳೆಸಿ, ಪರಿಸರವನ್ನು ಉಳಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗಬೇಕಾಗಿದೆ. ಮನೆಯಲ್ಲಿ ಒಂದು ಗಿಡ ನೆಟ್ಟು, ಅದನ್ನು ಪೋಷಿಸಿದರೆ, ಪ್ರಕೃತಿಗೆ ನಾವು ಕೊಡುಗೆ ನೀಡಿದಂತಾಗುತ್ತದೆ ಎಂಬ ಮಾತು ಅಕ್ಷರಷಹ ಸತ್ಯ.

ಹೀಗಾದಾಗ ಮುಂದಿನ ದಿನಗಳಲ್ಲಿ ಹತ್ತು ವರ್ಷಗಳ ಹಿಂದಿನ ವೈಭವ ಮರುಕಳಿಸುವುದರಲ್ಲಿ ಯಾವುದೇ ಸಂಶಯ ಇಲ್ಲ. ಆಗಾದಾಗ ಮಾತ್ರ ಮಳೆರಾಯನಿಗೆ ನಮ್ಮ ಮೊರೆ ಕೇಳಿಸಿ, ಇಳೆ ತಂಪಾಗಿಸುವುದರಲ್ಲಿ ಸಂಶಯವಿಲ್ಲ ಅಲ್ಲವೇ? ಹಾಗಾಗಿ ಇಂದೇ ಒಂದು ಸಸಿ ಬೆಳೆಸೋಣವೇ?