Thursday, December 25, 2008

ಇಪ್ಪತ್ತರಲ್ಲೇ ಎಪ್ಪತ್ತರಂತೆ ಕಾಣುವ ಯುವಜನಾಂಗ ಹಾದಿತಪ್ಪುತ್ತಿರುವುದೆಲ್ಲಿ?


ನೀರು ಸೇದಿ ಸೇದಿನೆಲವ ಅಗೆದು, ಅಗೆದುಎಪ್ಪತ್ತಾದರೂ ಇಪ್ಪತ್ತರಂತೆ ಕಾಣುತ್ತಿದ್ದರು ಅಂದಿನವರು!ಬೀಡಿ, ಸಿಗರೇಟ್ ಸೇದಿ ಸೇದಿಗುಟ್ಕಾ, ಪಾನ್ ಪರಾಗ್ ಅಗಿದು, ಅಗಿದುಇಪ್ಪತ್ತರಲ್ಲೇ ಎಪ್ಪತ್ತರಂತೆ ಕಾಣುತ್ತಾರೆ ಇಂದಿನವರು!
ಈ ಚುಟುಕು ಕವನ ಎಷ್ಟೊಂದು ಅರ್ಥಗರ್ಭಿತ ಅಲ್ಲವೇ? ಇಂದಿನ ಯುವ ಸಮುದಾಯ ಎಲ್ಲಿ ದಾರಿ ತಪ್ಪುತ್ತಿದೆ ಎಂಬ ಪ್ರಶ್ನೆಗೆ ನಿಖರವಾಗಿ ಉತ್ತರ ಹೇಳಿಬಿಡುವ ಈ ಚುಟುಕು, ಮೂರ್ತಿ ಚಿಕ್ಕದು, ಕೀರ್ತಿ ದೊಡ್ಡದು ಎಂಬ ಗಾದೆಯನ್ನು ನೆನಪಿಸುತ್ತದೆ.

ಇಸ್ಪೀಟ್ ಗೊತ್ತಿಲ್ಲ, ನೀರು ಕುಡಿದದ್ದು ಬಿಟ್ಟರೆ ಬೇರೇನನ್ನೂ ಕುಡಿದಿಲ್ಲ, ಹುಡುಗಿಯರೆಂದರೆ ಅಲರ್ಜಿ, ಲಾಟರಿಯಿಂದ ಬಲುದೂರ, ಸಿಗರೇಟ್ ಹೊಗೆ ಕಂಡರೆ ಮಾರುದ್ದ, ಗಾಂಜಾ, ಡ್ರಗ್ಸ್ ಎಂದರೇನು? ಎನ್ನುವ ಯುವಕ ಎಂದರೆ ತನ್ನ ಸಹಪಾಟಿಗಳ ದೃಷ್ಟಿಯಲ್ಲಿ ‘ಗಾಂಧಿ’ ಎಂದೇ ಬಿಂಭಿತ.

ಬರೇ ಓದಿಕೊಂಡು ಕಾಲ ಕಳೆಯುವ, ಬೇರೆ ಯಾವುದರಲ್ಲೂ ಆಸಕ್ತಿಯನ್ನೇ ತೋರದ ವಿದ್ಯಾರ್ಥಿಗಳು, ತಾವು ಓದುವ ಶಾಲೆ, ಕಾಲೇಜುಗಳಲ್ಲೇ ಅಸ್ಪೃಷ್ಯರು.

ವಿದ್ಯಾರ್ಥಿ ಜೀವನವೆಂದರೆ ಎಂಜಾಯ್ ಮಾಡುವುದು ಎಂದೇ ತಿಳಿದಿರುವ ಮಂದಿ ಓದುವ ವಿದ್ಯಾರ್ಥಿಗಳಿಂದ ದೂರವೇ ಉಳಿಯುವುದು ಇಂದಿನ ವಿಶೇಷ. ಯಾರದೋ ದುಡ್ಡಿನಲ್ಲಿ ಯೆಲ್ಲಮ್ಮನ ಜಾತ್ರೆ ಮಾಡುತ್ತಾ, ಸಿನಿಮಾ, ಟಾಕೀಸ್, ಬಸ್ ನಿಲ್ದಾಣ, ತಮ್ಮ ಮಾಮೂಲಿ ಅಡ್ಡಗಳಲ್ಲಿ ಕಾಲ ಕಳೆಯುತ್ತಾ ಇರುವುದು ಇವರ ಟ್ರೆಂಡ್.ಇಂಥಹ ಆಲೋಚನೆಯಲ್ಲಿ ಯುವತಿಯರೂ ಹಿಂದೆ ಬಿದ್ದಿಲ್ಲ.

ಕಾಲೇಜು ಮೆಟ್ಟಿಲು ಹತ್ತಿದ ದಿನದಿಂದಲೇ ಲೋಕವೆಲ್ಲಾ ಸುಂದರವಾಗಿ ಕಾಣುವಾಗ ತಾವೂ ಇನ್ನಷ್ಟು ಸುಂದರ ಕೊಡುಗೆ ನೀಡಲು ಮುಂದಾಗುತ್ತಾರೆ. ಪೆಪ್ಸಿ, ಕೋಕ್ ನಂತಹಾ ಪಾನೀಯಗಳು ಇವರ ಕ್ಯನಲ್ಲಿ ಫ್ಯಾಷನ್ ಆಗಿಬಿಡುತ್ತವೆ. ಪಾಸಾದ್ರೆ ಕಾಲೇಜು, ಫೇಲಾದ್ರೆ ಮ್ಯಾರೇಜು ಇದ್ದೇ ಇದೆಯಲ್ಲ ಎಂಬ ಭರವಸೆ ಫ್ಯಾಷನ್ ಲೋಕದ ಕದ ತಟ್ಟಲು ಪ್ರೇರೇಪಿಸಲೂಬಹುದು.

ಇದರರ್ಥ ಫ್ಯಾಷನ್ ಗೆ ಹೊರತಾದ ಯುವತಿಯರು ಇಲ್ಲವೆಂದೇನಿಲ್ಲ.ಯುವಕರಲ್ಲಿ ಇಂದು ಹೆಚ್ಚಾಗಿ ಕಂಡುಬರುವುದು ಸಿಗ್ರೇಟ್ ಸೇವನೆ. ಇದೊಂದು ಫ್ಯಾಷನ್. ಕಾಲೇಜು ವಿದ್ಯಾರ್ಥಿಗಳಲ್ಲಿ ಸಿಗ್ರೇಟ್ ಸೇದುವವರಿಗೆ ಒಂದು ಉನ್ನತ ಸ್ಥಾನ! ಅದೂ ವಿಲನ್ ಪಟ್ಟ. ಸಿಗರೇಟ್ ಜೊತೆಗೆ ಪಾನ್ ಪರಾಗ್ ಇದ್ದರೆ ಮಜಾ ಎಂದು ಯಾರೋ ಅಂದ್ರೆ ಅದನ್ನು ಶಿರಷಹಾ ಇವ್ರು ಪಾಲಿಸುತ್ತಾರೆ. ಇವೆರೆಡೂ ಇದ್ದರೆ ಒಂದು ಸೀನ್ ಕ್ರಿಯೇಟ್ ಮಾಡಲು ಆಗೊಲ್ಲ, ಜೊತೆಗೆ ಬೀಯರ್ ಇದ್ದರೆ ಅದರ ಮಜಾನೇ ಬೇರೆ ಎಂದು ಮುಂದುವರೆಯುತ್ತಾರೆ.

ಕಾಲೇಜಿನ ಕ್ಯಾಂಪಸ್ ನಲ್ಲಿ ಕಿಡಿಗೇಡಿಗಳು ಗಾಂಜಾ, ಅಫೀಮು ಮಾರಾಟ ಮಾಡುವ ಸುದ್ದಿ ಇವರ ಕಿವಿಗೆ ಸೋಕಿದರೆ ಸಾಕು, ತಕ್ಶಣ ಅದರ ರುಚಿಯನ್ನೂ ನೋಡೋಣ ಎಂದು ಅಲ್ಲಿಗೆ ಹಾಜರಿ ಕಡ್ಡಾಯವಾಗುತ್ತದೆ.

ಇದರ ಪ್ರಭಾವದಿಂದ ಇವರು ಹಾಳಾಗುವುದಲ್ಲದೆ ತಮ್ಮ ಪಡೆಯನ್ನೇ ಹಾಳುಮಾಡುತ್ತಾರೆ. ಒಬ್ಬರನ್ನು ನೋಡಿ ಮತ್ತೊಬ್ಬರು ಕಲಿತು, ತಮ್ಮ ಭವಿಷ್ಯದ ಹಾದಿಯನ್ನು ದುರ್ಗಮ ಮಾಡಿಕೊಳ್ಳುತ್ತಾ ಸಾಗುವ ಇವರು, ತಮ್ಮ ಅವನತಿಯ ಹಾದಿ ತುಳಿಯುತ್ತಾರೆ ಎಂಬುದು ಕಟುವಾದ ಸತ್ಯ!

ಇನ್ನು ಇಂದಿನ ದಿನಗಳಲ್ಲಿ ನಡೆಯುತ್ತಿರುವ ಬಹುಪಾಲು ಭಯೋತ್ಪಾದನೆ ಇರಬಹುದು, ಕೊಲೆ, ಸುಲಿಗೆ, ದರೋಡೆ ಮುಂತಾದ ಚಟುವಟಿಕೆಗಳಲ್ಲಿ ಯುವಕರದೇ ಸಿಂಹಪಾಲು.ಅಂದರೆ ಯುವಕರನ್ನು ಸರಿದಾರಿಗೆ ತರಲು ಆಗುವುದಿಲ್ಲವೇ?ಖಂಡಿತಾ ಆಗುತ್ತದೆ. ದಾರಿತಪ್ಪಿ ನಡೆಯುತ್ತಿರುವ ಯುವಜನತೆಯಲ್ಲಿ ಚಿಂತನೆ, ದೂರದೃಷ್ಟಿ, ಕುತೂಹಲ, ಸಂಶೋಧನೆ, ಆತ್ಮವಿಶ್ವಾಸ, ವ್ಯಚಾರಿಕ ದೃಷ್ಟಿಕೋನ ಮುಂತಾದವುಗಳನ್ನು ಭಿತ್ತಿ ಬೆಳೆಸಿದರೆ ಮಾತ್ರ ಸರಿದಾರಿಗೆ ತರಲು ಸಾಧ್ಯ ಅಲ್ಲವೇ?

Thursday, December 18, 2008

ನಿಧಿ ಬಲಿ ಕೇಳುತ್ತಿದೆಯೇ!?


ಕೇಳಲೆಷ್ಟು ಭಯಂಕರವೋ ಅಷ್ಟೇ ಸತ್ಯವೂ ಕೂಡಾ.
ಆಶ್ಚರ್ಯವಾಗುತ್ತಿದೆಯಾದರೂ ಇದು ಸತ್ಯ! ಇಂಥಹಾ ಅವಘಡಗಳು ಇಲ್ಲಿ ಪ್ರತಿ ೧೫ ದಿನಗಳಿಗೊಮ್ಮೆ, ತಿಂಗಳಿಗೊಮ್ಮೆ ನಡೆಯುವುದು ಬಹುತೇಕ ನಿಶ್ಚಿತವಾಗಿದೆ ಎಂದರೆ ತಪ್ಪಾಗಲಾರದು.
ಬೆಂಗಳೂರು-ಮ್ವಸೂರು ಹೆದ್ದಾರಿಯಲ್ಲಿ ಬೆಂಗಳೂರಿನಿಂದ ಸುಮಾರು ೬೫ ಕಿ.ಮೀ. ದೂರದಲ್ಲಿ ಒಂದು ಊರು ಇದೆ ಕಣ್ರೀ. ಈ ಗ್ರಾಮದ ವ್ಯಾಪ್ತಿಯಲ್ಲಿ ತಿಂಗಳಿಗೆ ಇಲ್ಲವೆಂದರೂ ನಾಲ್ಕಾರು ಅಪಘಾತಗಳು ಸಂಭವಿಸುವುದು, ಕನಿಷ್ಟ ಒಬ್ಬರಾದರೂ ಬಲಿಯಾಗುವುದು ಗ್ಯಾರಂಟಿ!
ಗ್ರಾಮದ ವಿಶಿಷ್ಟತೆಗಳು: ಇದೊಂದು ಪುರಾತನ, ಹೊಳೆಯ ಅಂಚಿನಲ್ಲಿರುವ ಗ್ರಾಮ. ಈ ಗ್ರಾಮಕ್ಕೆ ಶತಮಾನಗಳಷ್ಟು ವರ್ಷಗಳ ಇತಿಹಾಸವಿದೆ. ಕಣ್ವ ಮಹರ್ಷಿಗಳು ಇಲ್ಲಿ ಸಂಚರಿಸುತ್ತಾ, ದಿನನಿತ್ಯಾ ಹೊಳೆಯಲ್ಲಿ ಸ್ನಾನ ಮಾಡಿ ತಪಸ್ಸು ಮಾಡುತ್ತಿದ್ದರು ಎಂಬುದಕ್ಕೆ ಸಾಕಷ್ಟು ಪುರಾವೆಗಳೂ ಸಹ ಇವೆ.
ಈ ಗ್ರಾಮದಲ್ಲಿ ಚಾಲುಕ್ಯರ ಕಾಲದಲ್ಲಿ ನಿರ್ಮಿಸಿರುವ ದೇವಾಲಯಗಳು ಎನ್ನಲಾದ ಸುಮಾರು ೧೦ಕ್ಕೂ ಹೆಚ್ಚು ದೇವಾಲಯಗಳು ಇವೆ. ಇವುಗಳಲ್ಲಿ ಶ್ರೀ ಅಪ್ರಮೇಯ ದೇವಸ್ಥಾನವೂ ಒಂದು. ಇದು ತಮಗೆ ತಿಳಿದಿರಲೂಬಹುದು. ಈ ದೇವಸ್ಥಾನ ಪುರಾತನ ಕಾಲದಿಂದಲೂ ಭಕ್ತರ ಎಲ್ಲಾ ಅಭೀಷ್ಟೆಗಳನ್ನು ಈಡೇರಿಸುತ್ತಿದೆ ಎಂದು ಸುತ್ತಮುತ್ತಲ ಜನರ ಅನಿಸಿಕೆಯಾಗಿದೆ.
ಇಲ್ಲಿನ ದೇವಾಲಯಗಳಲ್ಲಿ ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ನಿಧಿ ಅಡಗಿಸಿಟ್ಟಿದ್ದಾರೆ ಎನ್ನುವ ನಂಬಿಕೆ ಇಲ್ಲಿನ ಗ್ರಾಮದವರಲ್ಲಿದ್ದು, ಇದೇ ಈ ಎಲ್ಲಾ ಅಪಘಾತಗಳು, ಅವಘಢಗಳಿಗೆ ಕಾರಣವಾಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇದನ್ನು ನಂಬಲು ಸಾಕಷ್ಟು ಅನುಭವಗಳೂ ಸಹ ಇಲ್ಲಿನ ಜನರಿಗೆ ಆಗಿವೆ.
ಈ ದೇವಾಲಯಗಳಲ್ಲಿನ ನಿಧಿಯನ್ನು ರಾಹು ಕಾಯುತ್ತಿದೆ ಎನ್ನಲಾಗಿದ್ದು, ಪ್ರತೀ ಅಮಾವಾಸ್ಯೆ, ಹುಣ್ಣಿಮೆಗಳಂದು ಈ ಭಾಗದಲ್ಲಿ ರಾಹು ನರಬಲಿ, ರಕ್ತ ಕೇಳುತ್ತಿದೆ ಎಂದೇ ಬಣ್ಣಿಸಲಾಗುತ್ತಿದೆ.
ಇದಕ್ಕೆ ಇಂಬು ನೀಡುವಂತೆ ಈ ಗ್ರಾಮದ ಆರಂಭದಿಂದ ಕೊನೆಯವರೆಗೂ ಈ ದಿನಗಳಲ್ಲಿ ಒಂದಾದರೊಂದು ಅಪಘಾತಗಳು ನಡೆಯುತ್ತಲೇ ಇವೆ. ತಿಂಗಳಿಗೆ ಇಲ್ಲವೆಂದರೂ ಒಬ್ಬರಾದರೂ ಸಾಯುತ್ತಿದ್ದಾರೆ.
ನಂಬಬಹುದೇ: ಮಾನವ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಸಾಧನೆ ಮೆರೆಯುತ್ತಿದ್ದರೂ, ಪ್ರಕೃತಿ ನಿಯಮಗಳಿಗೆ ವಿರುದ್ದವಾಗಿ ಏನೂ ಸಾಧಿಸಲು ಸಾದ್ಯವಾಗುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ ಈ ‘ಬಲಿ ಪುರಾಣ’!
ಜಗತ್ತು ಎಷ್ಟೇ ಮುಂಚೂಣಿಯಲ್ಲಿದ್ದರೂ ಪ್ರಕೃತಿಯನ್ನು ಮೀರಿಸಲು ಸಾದ್ಯವಾಗುವುದಿಲ್ಲ. ನಾವು ದೇವರಿದ್ದಾನೆ ಎಂಬುದನ್ನು ನಂಬುವುದಾದರೆ ಇದನ್ನೂ ನಂಬಲೇ ಬೇಕಲ್ಲವೇ?

Tuesday, December 16, 2008

ಇಂಥಹಾ ಸರ್ಕಾರಗಳು, ರಾಜಕಾರಣಿಗಳು, ಅಧಿಕಾರಿಗಳು ನಮಗೆ ಬೇಕೆ?

ದೇಶದ ರಾಜಕಾರಣ, ಆಳುವ ಸರ್ಕಾರಗಳು, ರಾಜಕೀಯ ವ್ಯವಸ್ಥೆ ಸ್ವಾತಂತ್ರ ಬಂದ ೬೧ ವರ್ಷಗಳಲ್ಲೇ ತನ್ನ ಮೂಲ ಧ್ಯೇಯ, ತತ್ವ ಸಿದ್ದಾಂತಗಳನ್ನು ಕಳೆದುಕೊಂಡು ಅಧೋಗತಿಗೆ ಇಳಿಯುತ್ತಿದ್ದು, ಜನಸಮಾನ್ಯರ ಟೀಕೆಗೆ ಗುರಿಯಾಗುತ್ತಿದೆ.
ರಾಜಕಾರಣಿಗಳು ಸ್ವಾರ್ಥಿಗಳಾಗುತ್ತಿದ್ದಾರೆ, ದೇಶದ ಹಿತ, ರಕ್ಷಣೆಗಿಂತ, ಸ್ವಹಿತ, ಸ್ವರಕ್ಷಣೆಯೇ ರಾಜಕಾರಣಿಗಳಿಗೆ ಮೇಲಾಗುತ್ತಿದೆ ಎಂಬ ಮಾತುಗಳು ಎಲ್ಲೆಡೆ ಕೇಳಲಾರಂಭಿಸಿವೆ. ದೇಶವನ್ನು ಅಭಿವೃದ್ದಿ ಪಥದತ್ತ ಮುನ್ನಡೆಸಿ, ವಿಶ್ವದಲ್ಲೇ ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಶ್ರಮಿಸಬೇಕಾಗಿರುವ ನಮ್ಮನ್ನು ಆಳುವ ಸರ್ಕಾರಗಳು, ರಾಜಕೀಯ ಪಕ್ಷಗಳು, ರಾಜಕಾರಣಿಗಳು ದೇಶವನ್ನು ಮುನ್ನಡೆಸುವಲ್ಲಿ ವಿಫಲರಾಗಿದ್ದಾರೆ. ಪರಸ್ಪರ ದ್ವೇಷ, ಅಸೂಯೆಗಳಿಂದ , ಕೆಸರೆರಚಾಟದಿಂದ ಸದಾ ಒಂದಲ್ಲಾ ಒಂದು ವಿವಾದದಲ್ಲಿ ಸಿಲುಕುತ್ತಿರುವ ನಮ್ಮ ರಾಜಕೀಯ ಪಕ್ಷಗಳು, ರಾಜಕಾರಣಿಗಳು ದೇಶವನ್ನು ಇನ್ನೇನು ಅಭಿವೃದ್ದಿ ಮಾಡಿಯಾವು?
ತಮಗಿಷ್ಟ ಬಂದಂತೆ ಕಾನೂನನ್ನು ಬದಲಿಸಿಕೊಂಡು, ಬೃಷ್ಟಾಚಾರ, ಅರಾಜಕತೆ, ಸ್ವಾರ್ಥತೆಯನ್ನು ಅಸ್ತ್ರವನ್ನಾಗಿ ಮಾಡಿಕೊಂಡಿರುವ ಈ ರಾಜಕಾರಣಿಗಳಿಗೆ ರಾಷ್ಟ್ರದ ಅಭಿವೃದ್ದಿ ಬೇಕಾಗಿಲ್ಲ. ತಮ್ಮ ಅಭಿವೃದ್ದಿಯಾದರೆ ಸಾಕು!. ಚುನಾವಣೆ ಸಂದರ್ಭದಲ್ಲಿ ಮಾತ್ರ ಜನಸಾಮಾನ್ಯರ ಬಳಿ ಬರುವ ಇವರು, ಚುನಾವಣೆ ಬಳಿಕ ಅವರನ್ನೇ ಮರೆತುಬಿಡುವ ಗೋಸುಂಬೆಗಳು.
ಇದರ ಪರಿಣಾಮವನ್ನು ಇಂದು ನಮ್ಮ ದೇಶ ಎದುರಿಸುತ್ತಿದ್ದು, ಜಗತ್ತಿನ ಎಲ್ಲೆಡೆ ಶಾಂತಿಧಾಮವಾಗಿ ಕಂಗೊಳಿಸುತ್ತಿದ್ದ ಭಾರತ, ಇಂದು ಹಾಡು ಹಗಲಲ್ಲೇ ಕೊಲೆ, ದರೋಡೆ, ಭಯೋತ್ಪಾದನೆಯಂತಹಾ ಕುಕೃತ್ಯಗಳ ತಾಣವಾಗಿ ಮಾರ್ಪಾಟಾಗಿದೆ.ಸರ್ವಧರ್ಮದ ನಾಡೆಂದು ಹೆಸರುವಾಸಿಯಾಗಿದ್ದ ನಮ್ಮ ದೇಶ ಇಂದು ಕೋಮುವಾದಿಗಾಳ ಬೀಡಾಗಿ ಮಾರ್ಪಾಡಾಗುತ್ತಿದೆ!
ದೇಶಕ್ಕೆ ಇಂದು ಮಾರ್ಗದರ್ಶಿಗಳ ಕೊರತೆ ಹೆಚ್ಚಾಗಿದ್ದು, ದೇಶವನ್ನು ಮುನ್ನಡೆಸುವಲ್ಲಿ ರಾಜಕಾರಣಿಗಳ ನಿರ್ಲ್ಯಕ್ಷ, ಆಳುವ ಸರ್ಕಾರಗಳ ಅನನುಭವದ ಕೊರತೆ ಎದ್ದುಕಾಣುತ್ತಿದೆ. ಈ ದುರ್ಬಲ ಆಡಳಿತದ ಸದುಪಯೋಗ ಪಡೆದುಕೊಳ್ಳುತ್ತಿರುವ ಪಾಕಿಸ್ತಾನದಂತಹಾ ಸಣ್ಣ ರಾಷ್ಟ್ರಗಳು ನಮ್ಮ ದೇಶದಲ್ಲಿ ಭಯೋತ್ಪಾದನೆ ಸೃಷ್ಟಿಸುತ್ತಿವೆ.೨೦೦೧ರಿಂದೀಚೆಗೆ ದೇಶದಲ್ಲಿ ಭಯೋತ್ಪಾದನೆ ಪ್ರಕರಣಗಳು ಹೆಚ್ಚುತ್ತಿದ್ದರೂ, ಅದನ್ನು ನಿಯಂತ್ರಿಸುವಲ್ಲಿ ನಮ್ಮ ಸರ್ಕಾರಗಳು ವಿಫಲವಾಗಿವೆ. ಘಟನೆ ನಡೆದ ವಾರದವರೆಗೆ ಮಾತ್ರ ಘಟನೆಗೆ ಕಾರಣರಾದವರ ವಿರುದ್ದ ಖಂಡಿಸುವ ಮಾತುಗಳನ್ನಾಡುವ ನಮ್ಮ ರಾಜಕಾರಣಿಗಳು, ಘಟನೆ ಮಾಸುವುದಕ್ಕೂ ಮುನ್ನ ಅದನ್ನು ಮರೆತು ತಮ್ಮ ಎಂದಿನ ಕಾರ್ಯ ನಿರ್ವಹಿಸುವ ಕೆಲಸದಲ್ಲಿ ತೊಡಗುತ್ತವೆ.
ಇನ್ನು ವಿರೋಧ ಪಕ್ಷಗಳು ಆಳುವ ಪಕ್ಷಗಳ ಕಾವಲು ನಾಯಿ ಇದ್ದಂತೆ ಎಂದು ಹೆಸರು ಪಡೆದುಕೊಂಡಿದ್ದಾವಾದರೂ ಆ ಹೆಸರು ಬಹಳ ವರ್ಷಗಳ ಹಿಂದೆಯೇ ಮರೆತುಹೋಗಿದೆ. ಕೇವಲ ಆಡಳಿತ ಪಕ್ಷವನ್ನು ಪರಾಭವಗೊಳಿಸುವ ತಂತ್ರಗಳನ್ನು ಹೆಣೆಯುವಲ್ಲಿ ತಲ್ಲೀನವಾಗಿರುವ ಇವು, ದೇಶದ ಅಬಿವೃದ್ದಿಯ ಬಗ್ಗೆ ಚಿಂತಿಸದಿರುವುದು ನಿಜಕ್ಕೂ ವಿಷಾಧನೀಯ.
ನಮ್ಮ ಅಧಿಕಾರಿಗಳ ಬಗ್ಗೆ ಹೇಳುವಂತೆಯೇ ಇಲ್ಲ. ರಾಜಕಾರಣಿಗಳ ಕ್ಯಗೊಂಬೆಗಳಾಗಿ ಅವರ ಮಾತನ್ನು ಶಿರಶಹಾ ಪಾಲಿಸುತ್ತಾ, ದೇಶದ ಅಭಿವೃದ್ದಿ ಬಗ್ಗೆ ಚಿಂತಿಸುವುದನ್ನೇ ಬಿಟ್ಟಿದ್ದಾರೆ. ಕೇವಲ ಭ್ರಷ್ಟಾಚಾರದಲ್ಲಿ ಮುಳುಗಿರುವ ಇವರನ್ನು ಜನಸಾಮಾನ್ಯರು ದೂರವಿಡಬೇಕಾಗಿದೆ.
ಒಟ್ಟಾರೆ, ನಮ್ಮ ದೇಶಕ್ಕೆ ಇಂದು ಸರಿಯಾದ ಮಾರ್ಗದರ್ಶಕರ ಅವಶ್ಯಕತೆ ಇದೆ. ದಕ್ಷ ಸರ್ಕಾರ, ಎಂಥಹಾ ಸಮಸ್ಯೆ ಬಂದರೂ ಪಕ್ಷಬೇಧ ಮರೆತು ಚರ್ಚಿಸಿ, ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಆಲೋಚಿಸುವ ರಾಜಕೀಯ ಪಕ್ಷಗಳ ಅವಶ್ಯಕತೆ ಇದೆ. ಹಾಗಾದಲ್ಲಿ ದೇಶ ಅಭಿವೃದ್ದಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾಗುವುದೇ?

Monday, December 15, 2008

ಪ್ರೀತಿ ಅಂದ್ರೆ ಇದೇನಾ...?

ಪ್ರೀತಿ-ಪ್ರೇಮ ಎಂದು ಆರಂಭಗೊಂಡು ೨ ವರ್ಷ ಕಳೆಯುವುದರೊಳಗೆ ವಿಚ್ಚೇದನ ಪಡೆಯುವ ಮಂದಿ ಇರುವ ಈ ಕಾಲದಲ್ಲಿ, ಪತಿಯ ನೆನಪಿಗೋಸ್ಕರ ೬೦ ವರ್ಷಗಳಿಂದ ಹಿಡಿದ ಕಾಯಕವನ್ನು ನಡೆಸಿಕೊಂಡು ಬರುತ್ತಿದ್ದಾರೆ ಎಂದರೆ ಬಹುಷಃ ನಂಬಲಿಕ್ಕಾಗದಿದ್ದರೂ ಇದು ಸತ್ಯ.ಯಾರಪ್ಪ ಎಂದು ಮೂಗಿನ ಮೇಲೆ ಬೆರಳಿಡುತ್ತಿದ್ದೀರಾ...? ನೂರತ್ತರ ಹರೆಯದಲ್ಲೂ ಬತ್ತದ ಸ್ವಾಭಿಮಾನಿ ವೃದ್ದೆಯೊಬ್ಬರ ಪ್ರೇಮದ ಕಥನ ಇದು!
ಪತಿ ಊರ ಮುಂಭಾಗದಲ್ಲಿರುವ ಒಂದು ಕಟ್ಟೆಯ ಮೇಲೆ ಕುಳಿತಿರುತ್ತಿದ್ದರು, ಯಾವಾಗಲೂ ಅಲ್ಲೇ ಓಡಾಡುತ್ತಿದ್ದರು ಎಂಬ ಕಾರಣಕ್ಕಾಗಿ ಪತಿ ಗತಿಸಿದ ನಂತರ ಅವರ ನೆನಪಿಗಾಗಿ ೬೦ ವರ್ಷಗಳಿಂದ ಅವರು ಕುಳಿತುಕೊಳ್ಳುತ್ತಿದ್ದ, ನಡೆದಾಡುತ್ತಿದ್ದ ಜಾಗವನ್ನು ಪ್ರತಿದಿನ ಸ್ವಚ್ಚವಾಗಿಡುವುದೇ ಈಕೆಯ ಕಾಯಕ!ಈಕೆ ಮಾದಮ್ಮ, ರಾಮನಗರ ಜಿಲ್ಲೆಯ, ಚನ್ನಪಟ್ಟಣ ತಾಲ್ಲೂಕಿನ ಬಿ.ವಿ.ಹಳ್ಳಿ ಎಂಬ ಗ್ರಾಮದವರು. ಎಲ್ಲರಿಗೂ ಮಾದರಿಯಾಗುವ ವ್ಯಕ್ತಿತ್ವ, ವಯಸ್ಸು ೧೧೦ರಿಂದ ೧೧೫ ಇರಬಹುದು. ಪತಿ ತಿಮ್ಮಯ್ಯ ಮರಣಹೊಂದಿ ೬೦ ವರ್ಷಗಳು ಕಳೆದಿವೆ. ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಇದ್ದಾರೆ.ಹುಟ್ಟು ಸ್ವಾಭಿಮಾನಿಯಾದ ಈಕೆ, ಇದುವರೆಗೂ ಯಾರಿಂದಲೂ ತನ್ನ ಕೆಲಸವನ್ನು ಮಾಡಿಸಿಕೊಂಡಿಲ್ಲ. ಇದರಲ್ಲೇನು ವಿಶೇಷ ಎಂದೀರಾ? ಕೇವಲ ಪತಿಯ ಮೇಲಿನ ಪ್ರೀತಿಗೋಸ್ಕರ ಈಕೆ ತನ್ನ ಕಾಯಕವನ್ನು ಪ್ರತಿದಿನ ಚಾಚೂ ತಪ್ಪದೆ ನಡೆಸಿಕೊಂಡು ಬರುತ್ತಿದ್ದಾರೆ.ಪ್ರತಿದಿನ ಈ ಕೆಲಸ ಮಾಡದೇ ಇದ್ದರೆ ಈಕೆಗೆ ಗಂಟಲಲ್ಲಿ ನೀರೂ ಇಳಿಯುವುದಿಲ್ಲ! ಗಂಡ ಕುಳಿತುಕೊಳ್ಳುವಾಗ ಸ್ವಚ್ಚವಾಗಿರಲಿ ಎಂದು ಆರಂಭಗೊಂಡ ಈ ಕಾಯಕ ಗಂಡನ ಮರಣಾನಂತರವೂ ಮುಂದುವರೆಸುತ್ತಿದ್ದೇನೆ ಎನ್ನುತ್ತಾರೆ ಈ ಅಜ್ಜಿ!ಈ ಕಾಯಕವನ್ನು ಮಾಡಲು ಬೇರೆಯವರಿಗೆ ಅವಕಾಶ ನೀಡದ ಈ ಅಜ್ಜಿ, ಸ್ವಚ್ಚ ಮಾಡಲು ಉಪಯೋಗಿಸುವ ಪೊರಕೆಯನ್ನೂ ಸಹ ಬೇರೆಯವರಿಂದ ಪಡೆಯುವುದಿಲ್ಲವಂತೆ!ಮನೆಯಲ್ಲಿ ನೋಡಿಕೊಳ್ಳುವವರು ಎಲ್ಲಾ ಇದ್ದರೂ, ತನ್ನ ದಿನನಿತ್ಯದ ಕಾಯಕವನ್ನು ತಾನೇ ಮಾಡಿಕೊಳ್ಳುವ ಈಕೆಯ ಉತ್ಸಾಹ ಇನ್ನೂ ಬತ್ತಿಲ್ಲ. ಜನಗಳ ಪ್ರೀತಿಗೆ ಪಾತ್ರವಾಗಿರುವ ಈಕೆಯನ್ನು, ಪಕ್ಕದ ಗ್ರಾಮದ ಜನರೂ ಎಲ್ಲರ ಮನೆ ಮಗಳಂತೆ ನೋಡಿಕೊಳ್ಳುತ್ತಿದ್ದಾರೆ.ಇನ್ನೊಂದು ವಿಶೇಷವೇನೆಂದರೆ ಪರರ ಹಣ ಈಕೆಗೆ ಪಾಶಕ್ಕೆ ಸಮ! ತನ್ನ ಕಣ್ಣೆದುರಿಗೇ ದುಡ್ಡು ಬಿದ್ದಿದ್ದರೂ ಈಕೆ ತೆಗೆದುಕೊಳ್ಳುವುದಿಲ್ಲ!ಬೇಕೆಂದು ಕೆಲವರು ಈಕೆಯ ಮುಂದೆ ದುಡ್ಡು ಇಟ್ಟರೂ ಈಕೆ ಕಣ್ಣೆತ್ತಿಯೂ ಸಹ ಅದನ್ನು ನೋಡುವುದಿಲ್ಲವಂತೆ. ಇಂಥಹವರೂ ಇದ್ದಾರೆಯೇ!೧೧೦ ವರ್ಷಗಳಾದರೂ ಈಕೆ ಇದುವರೆಗೂ ಯಾವ ಖಾಯಿಲೆಯಿಂದಲೂ ಬಳಲಿಲ್ಲ ಎಂದರೆ ನಂಬುತ್ತೀರಾ? ಸರಳ ಜೀವನ, ಮಿತ ಆಹಾರ, ಆರೋಗ್ಯಕರ ಜೀವನ ಈಕೆಯ ದೀರ್ಘಾಯಸ್ಸಿನ ಗುಟ್ಟು!ಒಂಟಿ ಜೀವನ ನಡೆಸುತ್ತಿರುವ ಈಕೆಯ ಬದುಕು ಅಂತ್ಯಗೊಳ್ಳುವ ದಿನಗಳು ಹತ್ತಿರವಾಗುತ್ತಿವೆ. ಆದರೂ ಈಕೆಗೆ ತನ್ನ ಗಂಡನ ಮೇಲಿನ ಪ್ರೀತಿ ಬತ್ತಿಲ್ಲ ಎಂದು ಕಾಣುತ್ತಿದೆ. ಪ್ರೀತಿ ಅಂದ್ರೆ ಇದೇನಾ....?