Friday, January 23, 2009

18ನೇ ಶತಮಾನಕ್ಕೆ ಹೋಗಬೇಕೆ!? ಹಾಗಾದ್ರೆ ಬನ್ನಿ

KALLINA RATHA
ಇಂದಿನ ಬೆಂಗಳೂರಿನ ಆ ವಾಯುಮಾಲಿನ್ಯದಿಂದಾಗಿ, ಆ ವಾಹನಗಳ ಶಬ್ದಗಳ ಕಿರಿಕಿರಿಯಿಂದಾಗಿ ಬೇಸತ್ತಿದ್ದೀರಾ?ಬೆಂಗಳೂರು ಎಂಬ ಮಾಯೆಯ ಮಹಾನಗರಿಯನ್ನು ಬಿಟ್ಟು, ಸ್ವಲ್ಪ ಸಮಯ ರಿಲ್ಯಾಕ್ಸ ಪಡೆದು, ೧೮ನೇ ಶತಮಾನಕ್ಕೆ ಹೋಗೋಣ ಬನ್ನಿ...!

ಬೆಂಗಳೂರಿನಿಂದ ಮೈಸೂರು ಕಡೆಗೆ ಕೇವಲ ೪೫ ಕಿ.ಮೀ.ಯಲ್ಲಿ ನಿಮಗೆ ಸಿಗುತ್ತದೆ ೧೮ನೇ ಶತಮಾನದ ಚಿತ್ರಣ! ನಿಜ ಕಣ್ರೀ... ಹೆದ್ದಾರಿಯಲ್ಲೇ ಜಾನಪದ ಲೋಕ ಎಂಬ ಒಂದು ಪ್ರಾಚೀನ ಇತಿಹಾಸವನ್ನು ನೆನಪಿಸುವ ಒಂದು ತಾಣ ಇದೆ.

ದಿನನಿತ್ಯದ ಜಂಜಾಟವನ್ನೆಲ್ಲಾ ಮರೆತು, ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ, ಒಂದು ಸಲ ಇಲ್ಲಿಗೆ ಬರಲೇ ಬೇಕು ಕಣ್ರೀ. ಇಲ್ಲಿ ಅಂಥದ್ದೇನಿದೆ ಅಂತೀರಾ...?

ನಿಮ್ಮ ಊಹೆಗೂ ನಿಲುಕದಷ್ಟು ಸಂಗತಿಗಳು ಇಲ್ಲಿ ಸಿಗುತ್ತವೆ. ಹೆಬ್ಬಾಗಿಲಿನಲ್ಲೇ ನಿಮಗೆ ನಮ್ಮ ಪ್ರಾಚೀನ ಗತಕಾಲದ ನೆನಪಾಗುತ್ತದೆ.ಒಳಗೆ ಪ್ರವೇಶ ಮಾಡುತ್ತಿದ್ದಂತೆ ಗಾದೆಗಳ ಬರವಣಿಗೆ ನಿಮ್ಮನ್ನು ಸ್ವಾಗತಿಸುತ್ತವೆ.

ಮುಂದಡಿ ಇಡುತ್ತಿದ್ದಂತೆ ನಿಮಗೆ ೧೮ನೇ ಶತಮಾನದ ಅನುಭವ ಆಗಲು ನಿಮಗೆ ಸಾಕಷ್ಟು ಸಮಯ ಬೇಕಾಗುವುದಿಲ್ಲ ಅನಿಸುತ್ತದೆ.

ಮಾರ್ಗದುದ್ದಕ್ಕೂ ತೆಂಗಿನ ಮರಗಳ ಸಾಲು, ಪಕ್ಕದಲ್ಲೇ ಉದ್ಯಾನ, ಅಲ್ಲಲ್ಲಿ ಓಡಾಡುವ ಬಾತುಕೋಳಿಗಳು, ಮರದ ಮೇಲಿಂದಲೇ ನಿಮ್ಮನ್ನು ಸ್ವಾಗತಿಸುವ ವಾನರ ಗುಂಪು, ಆ ಪಕ್ಷಿಗಳ ಚಿಲಿಪಿಲಿ ಕಲರವ, ನಿಜಕ್ಕೂ ಇಂಥಾ ಒಂದು ಅದ್ಭುತ ಲೋಕ ಇನ್ನೂ ಉಳಿದಿದೆಯೇ ಎಂದು ನಿಮಗೆ ಅನ್ನಿಸದೇ ಇರದು!

ಗತಕಾಲದ ಇತಿಹಾಸ ಸಾರುವ ಪಳೆಯುಳಿಕೆಗಳು, ವಸ್ತುಗಳು, ದೇವಾಲಯಗಳು, ಉದ್ಯಾನವನಗಳು, ಕಲಾಕೃತಿಗಳು, ಹಳೆಯ ರಥಗಳು, ಗ್ರಂಥಗಳು, ಲೋಕಮಹಲ್, ವಸ್ತು ಸಂಗ್ರಹಾಲಯ, ಗಿಡ ಮೂಲಿಕೆಗಳು, ಹಂಸವಿಹಾರ, ಕೆರೆ, ಕಾಡು ಹೀಗೆ ಎಲ್ಲಾ ಇಲ್ಲಿ ಕಾಣಸಿಗುತ್ತವೆ.

ಮುಖ್ಯವಾಗಿ ಕ್ರಿ.ಶ.೧೧೫೦ ವರ್ಷಗಳದ್ದು ಎನ್ನಲಾದ ವಿಗ್ರಹಗಳು, ಶಿಲಾಶಾಸನಗಳು, ವೀರಗಲ್ಲು, ಮಾಸ್ತಿಕಲ್ಲುಗಳು, ೧೪-೧೫ನೇ ಶತಮಾನದ ಕಲ್ಲಿನಿಂದ ಕೆತ್ತಲ್ಪಟ್ಟಿರುವ ದೇವರ ವಿಗ್ರಹಗಳು ಇಲ್ಲಿನ ಆಕರ್ಷಣೀಯವಾಗಿವೆ.

ಒಳಗೆ ಹೋದರೆ ನಿಮಗೆ ಅಲ್ಲಿಂದ ಬರಲು ಮನಸೇ ಆಗುವುದಿಲ್ಲ ಎಂಬ ಅನಿಸಿಕೆ ನನ್ನದು.ಬರೆಯಲು ಸಾದ್ಯವಾಗದಷ್ಟು ವಿಸ್ಮಯಗಳು ಇಲ್ಲಿವೆ. ವಿಹರಿಸಿ, ಸಕಾದಾಗ ಅಲ್ಲಿ ಕೂಲಾಗಿ ಕುಳಿತು, ಊಟ ಮಾಡಲು ಪ್ರಸಿದ್ದ ಕಾಮತ್ ಲೋಕರುಚಿ ಭೋಜನಶಾಲೆಯೂ ಸಹ ಇದೆ.

ಬನ್ನಿ ಸ್ವಲ್ಪ ಸಮಯ ನಮ್ಮ ಜಾಗವನ್ನು ಬಿಟ್ಟು ಜಾನಪದ ಲೋಕಕ್ಕೆ ಹೋಗಿ ಬರೋಣ. ನಮ್ಮ್ ಮನವನ್ನು ಸಂತೋಷಪಡಿಸೋಣ. ಬರ್ತೀರಿ ತಾನೆ?

ಇಷ್ಟಾರ್ಥ ಈಡೇರಿಸುವ ಬಸವ!


ನೀವು ನೆನೆದುಕೊಂಡಂತೆ ಆಗಬೇಕೆ?, ನಿಮಗೆ ಪ್ರೊಮೋಷನ್ ಬೇಕೆ?, ಕುಟುಂಬದಲ್ಲಿ ಶಾಂತಿ ನೆಲೆಸಬೇಕೆ?, ನಿಮ್ಮ ತೊಂದರೆ ಪರಿಹಾರವಾಗಬೇಕೆ?, ಸಂತಾನಭಾಗ್ಯ ಬೇಕೆ?, ನಿಮ್ಮ ಎಲ್ಲಾ ದೋಷ ಕಳೆಯಬೇಕೆ?...ಹಾಗಾದ್ರೆ ಯಾಕೆ ತಡ? ಬನ್ನಿ ನಮ್ಮ ಬಸವನ ಬಳಿಗೆ...!!!ಎಲ್ಲಿದೆ ಅಂತ ಕೇಳ್ತಾಇದೀರಾ? ಮಾಯಾನಗರಿಯೆಂಬ ಬೆಂಗಳೂರಿನಿಂದ ಕೆಲವೇ ಕಿ.ಮೀ.ಗಳ ದೂರದಲ್ಲೇ ಇದೆ ಈ ಬಸವನ ವಾಸ್ತವ್ಯ. ಕಲಿಯುಗದ ನಿಜದೇವರು ಎಂದೇ ಬಿಂಬಿತವಾಗಿರುವ ಈ ಬಸವ ಮಂಡ್ಯ ಜಿಲ್ಲೆಯಲ್ಲಿದೆ.ಆಶ್ಚರ್ಯ ಆದರೂ ನಿಜ ಕಣ್ರೀ. ನಿಮ್ಮ ಎಲ್ಲಾ ಕೋರಿಕೆಗಳನ್ನೂ ಈಡೇರಿಸಲು ಈ ಬಸವನ ಜನನ ಆಗಿದೆ ಎಂದೇ ಹೇಳುತ್ತಾರೆ ಈ ಭಾಗದ ಜನ! ಅದು ನಿಜವೂ ಕೂಡಾ.ಹಾಗಾದ್ರೆ ಬನ್ನಿ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಚಿಕ್ಕರಸಿನಕೆರೆ ಗ್ರಾಮಕ್ಕೆ. ಚಿಕ್ಕರಸಿನಕೆರೆಯ ಶ್ರೀ ಕಾಲಭ್ಯರವೇಶ್ವರನ ದೇವಾಲಯಕ್ಕೆ. ಇಲ್ಲೇ ಇರುವುದು ಈ ಬಸವ.ಜಗತ್ತಿನಲ್ಲಿ ನಾನಾ ವಿಸ್ಮಯಗಳನ್ನು ಸೃಷ್ಟಿಸುತ್ತಿರುವ ಮಾನವನಿಂದ ಅಸಾಧ್ಯವಾದ ಕೆಲಸವನ್ನು ಸಾಮಾನ್ಯವಾದ ದನ(ಹಸು) ಮಾಡುತ್ತದೆಯೇ ಎಂದು ಯೋಚಿಸಬೇಡಿ. ಈ ಬಸವ ಎಲ್ಲಾ ದನಗಳ ಹಾಗಲ್ಲ, ಇದಕ್ಕೆ ತನ್ನದೇ ಆದ ಕೆಲವು ವಿಶಿಷ್ಟತೆಗಳು, ಆಚರಣೆಗಳು ಇವೆ.ಈ ಬಸವನ ದರ್ಶನ ಭಾಗ್ಯ ದೊರೆಯುವುದೇ ಪುಣ್ಯ ಕಣ್ರೀ. ಆ ದೇವಾಲಯದ ಬಳಿ ಈ ಬಸವನನ್ನು ನೋಡಲು ಇಡೀ ರಾಜ್ಯದಿಂದಷ್ಟೇ ಅಲ್ಲ, ದೇಶ, ವಿದೇಶಗಳಿಂದಲೂ ಸಹ ಭಕ್ತರು ಆಗಮಿಸುತ್ತಾರೆ.ಇಡೀ ಮಂಡ್ಯ ಜಿಲ್ಲೆಯ ಜನತೆ ಈ ಬಸವನನ್ನು ತಮ್ಮ ಮನೆದೇವರನ್ನಾಗಿ ಮಾಡಿಕೊಂಡಿದ್ದಾರೆ. ಹಾಗೆಯೇ ಈ ಬಸವನೂ ಸಹ ಅವರ ಕಷ್ಟ-ಸುಖಗಳಲ್ಲಿ ಭಾಗಿಯಾಗಿದ್ದಾನೆ. ಈ ಬಸವ ದೇವರ ತದ್ರೂಪು ಎಂದೇ ಜನ ಭಾವಿಸಿ, ಇದನ್ನೇ ನಂಬಿದ್ದಾರೆ. ತಮ್ಮ ಯಾವುದೇ ಕೆಲಸಗಳನ್ನು ಪ್ರಾರಂಭಿಸಲು, ಕಷ್ಟ ನಿವಾರಿಸಿಕೊಳ್ಳಲು ಈ ಬಸವನ ಬಳಿಗೆ ಬರುವ ಜನ, ಹಿಂತಿರುಗಿ ಹೋಗುವಾಗ ನಿರಾಸೆಯಿಂದ ಹೋಗುವುದನ್ನು ಯಾರೂ ಕಂಡಿಲ್ಲವಂತೆ.ಸುಮಾರು ೩೦ ವರ್ಷಗಳಿಂದ ಈ ಬಸವ ಇಲ್ಲಿಯ ಜನರ ಕಷ್ಟ-ಸುಖಗಳಿಗೆ ಸ್ಪಂದಿಸುತ್ತಿದ್ದು, ಈ ಬಸವ ಇರುವ ಈ ತಾಣದಲ್ಲಿ ಇಲ್ಲಿಯವರೆಗೂ ಬರಗಾಲವೇ ಬಂದಿಲ್ಲವಂತೆ! ಸುಂದರ ಪ್ರಕೃತಿಯ ಮಡಿಲಿನಲ್ಲಿ, ಮಲೆನಾಡನ್ನೇ ನಾಚಿಸುವಂತೆ ಇಡೀ ಜಿಲ್ಲೆಯನ್ನೇ ಸಂಪದ್ಭರಿತವಾಗಿ ಇಟ್ಟಿರುವ, ಜನರನ್ನು ಕಾಯುತ್ತಿರುವ ಈ ಬಸವ ಈ ಭಾಗದ ಜನರಿಗೆ ಸುಪ್ರೀಮ್ ಕೋರ್ಟ್ ಆಗಿರುವುದು ವಿಶೇಷ.ಈ ಭಾಗದಲ್ಲಿ ಎಲ್ಲಾದರೂ ಕಳ್ಳತನ, ದರೋಡೆ ಮುಂತಾದವುಗಳು ನಡೆದರೆ, ಕಳ್ಳರನ್ನು ಹಿಡಿಯುವ ಕೆಲಸ ಬಸವನದಂತೆ! ಆ ಕಳ್ಳ ಯಾವುದೇ ಗವಿಯಲ್ಲಿ ಅವಿತಿರಲಿ, ಅವನನ್ನು ಶಿಕ್ಷಿಸುವುದು ಬಸವನ ಕೆಲಸ! ಹಾಗಾಗಿ ಈ ಭಾಗದಲ್ಲಿ ಬಸವನಿಗೆ ಹೆದರಿ ಕಳ್ಳರು ಕಾಲ್ಕಿತ್ತಿದ್ದಾರಂತೆ!ಹಾಗೆಯೇ ಈ ಬಸವ ಸುಮ್ಮನೆ ಬಿಟ್ಟಿ ಕೆಲಸ ಮಾಡಿಕೊಡುವುದಿಲ್ಲ! ಅದಕ್ಕೆ ದಕ್ಷಿಣೆಯನ್ನು ಕೊಡಲೇಬೇಕು. ಇಲ್ಲದಿದ್ದರೆ ನಿಮ್ಮ ಕೆಲಸ ಪೆಂಡಿಂಗ್. ಮೋಸ ಮಾಡುವುದು ಇಲ್ಲಿ ನಡೆಯುವುದಿಲ್ಲ. ಮೋಸಗಾರರ ಬಗ್ಗೆ ಇದಕ್ಕೆ ಮೊದಲೇ ಮಾಹಿತಿ ಸಿಕ್ಕಿರುತ್ತದೆ ಹುಷಾರ್!ಹಾಗಾಗಿ ನಿಮ್ಮ ಕೆಲಸಕ್ಕೆ ತಕ್ಕಂತೆ ದಕ್ಷಿಣೆ ನೀಡಲೇಬೇಕು. ಇಂತಿಷ್ಟು ಅಂತಲ್ಲ, ಕಡಿಮೆಯನ್ನೂ ತೆಗೆದುಕೊಳ್ಳುವುದಿಲ್ಲ. ಕೊಡದಿದ್ದರೆ ನಿಮ್ಮ ಮನೆಗೇ ಬಂದೀತು ಜೋಕೆ! ನೀವು ಕೊಡುವವರೆಗೂ ನಿಮ್ಮ ಮನೆ ಬಿಟ್ಟು ಜಗ್ಗುವುದಿಲ್ಲ.ಯಾರೇ ಆಗಲಿ, ಈ ಬಸವನ ಮುಂದೆ ಎಲ್ಲರೂ ಒಂದೆ. ಎಲ್ಲರಿಗೂ ಒಂದೇ ದರ್ಶನ. ಬಡವರಿಗಾಗಲೀ, ಶ್ರೀಮಂತರಿಗಾಗಲೀ, ದೇಶದ ಪ್ರಧಾನಮಂತ್ರಿಗಾಗಲೀ ಯಾರೇ ಬಂದರೂ ಅದಕ್ಕಾಗಿ ಕಾಯಲೇಬೇಕು... ಇದು ಇದರ ನಿಯಮ!ಒಟ್ಟಿನಲ್ಲಿ ಬಸವ ಜನರನ್ನು ಕಾಪಾಡುತ್ತಿರುವುದಂತೂ ಸತ್ಯ. ಒಮ್ಮೆ ಈ ಬಸವನ ದೇವಾಲಯಕ್ಕೆ ಹೋಗಿ ಬಂದಾಗಲೇ ಇದರ ಮಹತ್ವ ತಿಳಿಯುವುದು. ಹಾಗಾಗಿ ಒಮ್ಮೆ ನಿಮ್ಮ ಕಷ್ಟ ಹೇಳಿಕೊಳೋಕೆ ಹೋಗ್ತೀರಿ ತಾನೇ?

ಬರಿದಾದ ನದಿ-ಕೆರೆ, ಮಳೆರಾಯನಿಗೆ ಕೇಳಿಸದೇ ಮೊರೆ?


ಅದೊಂದು ದೊಡ್ಡಕೆರೆ, ಸುಮಾರು ೧೦ ಸಾವಿರ ಎಕರೆ ಪ್ರದೇಶದಲ್ಲಿ ತನ್ನನ್ನು ಆವರಿಸಿಕೊಂಡಿದೆ. ಸುತ್ತಲೂ ದೊಡ್ಡ ಏರಿ, ಅಲ್ಲಲ್ಲಿ ನೀರು ಹೊರಹೋಗಲು ನಿರ್ಮಿಸಿರುವ ತೂಬುಗಳು, ಕಣ್ಣಾಯಿಸಿದಷ್ಟೂ ದೂರ ಕಾಣುವ ನೀರು, ಅದೆಷ್ಟೋ ದೂರದಲ್ಲಿ ಚಿಕ್ಕದಾಗಿ ಕಾಣುವ ಕೆರೆಯ ದಡ, ಅಲ್ಲೇ ಸಾಲುಗಟ್ಟಿ ನಿಂತಿರುವ ತೆಂಗಿನಮರಗಳು, ಹಿಂದೆಯೇ ಚಿಕ್ಕದಾಗಿ ಕಾಣುವ ದೊಡ್ಡ ದೊಡ್ಡ ಬೆಟ್ಟ-ಗುಡ್ಡಗಳು, ಆಗಸ ಇಲ್ಲೇ ಎಲ್ಲೋ ಹತ್ತಿರದಲ್ಲಿ ಕೊನೆಯಾಗಿದೆಯೇನೋ ಎನ್ನುವ ಅನುಭವ!

ಎಷ್ಟೊಂದು ಸುಂದರ, ವರ್ಣಿಸಲಸಾಧ್ಯ ಅಲ್ಲ್ಲವೇ? ಒಮ್ಮೆ ನಮ್ಮ ಕ್ಯಾಮರಾದೊಳಗೆ ಸೆರೆಸಿಕ್ಕಿಸಿಕೊಳ್ಳೋಣ ಎಂದುಕೊಂಡರೆ ನೀವು ೧೦ ವರ್ಷ ಹಿಂದಕ್ಕೆ ಹೋಗಬೇಕಾಗುತ್ತದೆ ಜೋಕೆ!ನಿಜ, ಅದೇ ದೊಡ್ಡಕೆರೆ ಇಂದು ನೀರಿಲ್ಲದೆ ಸೊರಗಿದೆ, ಹೂಳುತುಂಬಿಕೊಂಡು, ಕೆರೆಯೆಲ್ಲಾ ನುಂಗಣ್ಣರ ಹಾವಳಿಗೆ ತುತ್ತಾಗಿ ಬೇಸಾಯ ಭೂಮಿಯಾಗಿ ಮಾರ್ಪಾಟಾಗಿದೆ, ಕೆರೆ ಕೇವಲ ಕೆಲವೇ ಎಕರೆ ಪ್ರದೇಶವನ್ನು ತನ್ನದಾಗಿಸಿಕೊಂಡಿದೆ, ದಡದಲ್ಲಿ ಕಾಣುತ್ತಿದ್ದ ತೆಂಗಿನಮರಗಳು, ಬೆಟ್ಟಗುಡ್ಡಗಳು ಪಕ್ಕದಲ್ಲಿಯೇ ಇದೆಯಲ್ಲಾ ಎನ್ನುವಂತೆ ಭಾಸ! ಇದು ವಾಸ್ತವ.

ಬೆಳಗಾದೊಡನೆ ತನ್ನಿರುವಿಕೆಯ ಬಳಿ ಈಜಾಡಲು ಆಗಮಿಸುತ್ತಿದ್ದ ಹಳ್ಳಿಯ ಮಕ್ಕಳು, ಪಾತ್ರೆ-ಬಟ್ಟೆ ತೊಳೆಯಲು ಆಗಮಿಸುತ್ತಿದ್ದ ಹೆಂಗೆಳೆಯರು, ದನ-ಕರುಗಳನ್ನು ಸ್ವಚ್ಚಗೊಳಿಸಲು ಬರುತ್ತಿದ್ದ ಜನ, ತನ್ನ ವ್ಯಾಪ್ತಿಯ ಸಾವಿರಾರು ಎಕರೆ ಪ್ರದೇಶಕ್ಕೆ ಬೇಸಾಯಕ್ಕೆ ನೀರುಣಿಸುವ ಸಲುವಾಗಿ ಆಗಮಿಸುತ್ತಿದ್ದ ರೈತಾಪಿ ವರ್ಗ ಇವೆಲ್ಲಾ ನೆನಪುಗಳಲ್ಲಿ ಕಾಲಕಳೆಯುತ್ತಾ, ದಶಕಗಳ ಹಿಂದೆ ಪಕ್ಕದಲ್ಲಿಯೇ ಇದ್ದ ಹತ್ತಾರು ಹಳ್ಳಿಗಳ ಮಣ್ಣಿನಮಕ್ಕಳ ಹಿತ ಕಾದಿದ್ದ, ದಿನನಿತ್ಯದ ಬದುಕಿಗೆ ಆಸರೆಯಾಗಿದ್ದ ಕೆರೆ ಇಂದು ಮೂಕರೋಧನೆ ಅನುಭವಿಸುತ್ತಿದೆ.

ಬೇಸಾಯವನ್ನು ಬಿಟ್ಟು ಸೂರ್ಯ ಕಣ್ಣು ಬಿಡುವ ಮೊದಲೇ ತಮ್ಮ ಕೆಲಸ-ಕಾರ್ಯಗಳಿಗಾಗಿ ಪಟ್ಟಣದ ಕಡೆ ಧಾವಿಸುವ ಜನ, ಕೆರೆಗೂ ನಮಗೂ ಸಂಬಂಧವೇ ಇಲ್ಲ ಎನ್ನುವಂತೆ ಮನೆಯ ಬಳಿಯೇ ತಮ್ಮ ದಿನನಿತ್ಯದ ಕಾಯಕದಲ್ಲಿ ತೊಡಗುವ ಹೆಂಗೆಳೆಯರು, ಈಜಾಡುವುದನ್ನೇ ಮರೆತ ಮಕ್ಕಳು...

ವಿಪರ್ಯಾಸ ಅಲ್ಲವೇ? ಕಾಲ ಮುಂದಕ್ಕೆ ಹೋದಂತೆ ಅನೇಕ ಬದಲಾವಣೆಗಳಾಗುತ್ತಿವೆ, ಜಗತ್ತು ಅಭಿವೃದ್ದಿಪಥದತ್ತ ಸಾಗುತ್ತಿದೆ ನಿಜ, ಆದರೆ ಈ ಪ್ರಕೃತಿ ಸೊಬಗು? ನಮ್ಮನ್ನು ಬಿಟ್ಟು ಬಹುದೂರ ಹೋಗುತ್ತಿದೆ!ಏನಾದರೊಂದು ಪಡೆಯಲು ಇನ್ನೊಂದು ಕಳೆದುಕೊಳ್ಳಬೇಕು ಎನ್ನುವ ಮಾತು ಇಲ್ಲಿ ನಿಜ ಎನಿಸುತ್ತದೆ. ಇಲ್ಲಿ ಕೆರೆಯೊಂದೇ ಪ್ರಕೃತಿಯ ಸುಂದರ ಅನುಭವ ನೀಡುತ್ತದೆ ಎಂದಲ್ಲ, ಪ್ರಕೃತಿಯ ಎಲ್ಲಾ ಅನುಭವಗಳಿಂದಲೂ ನಾವು ವಂಚಿತರಾಗುತ್ತಿದ್ದೇವೆ.

ಏಕೆ ಹೀಗಾಯ್ತು ಎಂದು ಯೋಚಿಸುವ ಮೊದಲು ನಮ್ಮಲೇ ಒಂದು ಅತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.ಆ ದಿನಗಳಲ್ಲಿ ಚೆನ್ನಾಗಿ ಮಳೆಯಾಗುತ್ತಿತ್ತು, ಕಾಲಕಾಲಕ್ಕೆ ಮಳೆಯಾಗುತ್ತಿದ್ದರಿಂದ ಕೆರೆ-ಕಟ್ಟೆಗಳು ತುಂಬಿ, ಸಮೃದ್ದಿಯಾಗಿ ಮುಂದಿನ ವರ್ಷದವರೆಗೆ ರೈತರನ್ನು ಕಾಯುತ್ತಿತ್ತು.

ಆದರೆ ಈಗ? ಮಳೆಯಾಗಲು ಮಳೆಗಾಲವೇ ಬೇಕಾಗಿಲ್ಲ, ಯಾವ ಕಾಲವಾದರೂ ಸೈ. ಜಗತ್ತು ವೇಗವಾಗಿ ಓಡುತ್ತಿದೆ, ಇದರಿಂದ ಮಳೆಯೂ ಹೊರತಾಗಿಲ್ಲ, ಮಳೆಗಾಲ ಶುರುವಾಗಿ ೧೫ ದಿನಗಳಲ್ಲೇ ಕರೆ-ಕಟ್ಟೆಗಳು ಭರ್ತಿ! ಮುಂದಿನ ದಿನಗಳಲ್ಲಿ ಮುಳುಗಡೆ, ಪ್ರವಾಹ.... ಹೀಗೆ ಅನಾವೃಷ್ಟಿಯದ್ದೇ ಕಾರುಬಾರು. ಅಲ್ಲದೇ ಜಾಗತೀಕರಣದ ಬಿಸಿ ಪ್ರಕೃತಿಯ ಮೇಲೂ ತಟ್ಟಿದ್ದು, ಅದರ ಪರಿಣಾಮವನ್ನು ನಾವು ಇಂದು ಎದುರಿಸುತ್ತಿದ್ದೇವೆ.

ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ವಿಪರೀತವಾಗಿ ಬಳಸಿಕೊಂಡ ಮಾನವ, ಇಂದು ಅದಕ್ಕೆ ಬೆಲೆತೆರುತ್ತಿದ್ದಾನೆ ಎಂದರೆ ತಪ್ಪಾಗಲಾರದು. ಮಳೆಗೆ ಮೂಲ ಆಸರೆಯಾದ ಅರಣ್ಯಗಳನ್ನು ನಾಶ ಮಾಡಿದ, ಅದರಿಂದಾಗಿ ಈಗ ಮಳೆಯ ಆಗಮನವೇ ಅಪರೂಪವಾಗಿದೆ.

ಮಳೆ ಬಿದ್ದರೂ ಅದರ ರುದ್ರನರ್ತನಕ್ಕೆ ಬಲಿಯಾದವರ ಸಂಖ್ಯೆ ಅದೆಷ್ಟೋ? ಇದರಿಂದ ಪಾರಾಗಲು ಗಿಡ ನೆಡಲು ರೂಪಿಸಿದ ವನಮಹೋತ್ಸವ ಕಾರ್ಯಕ್ರಮ ಕಾಟಾಚಾರಕ್ಕೆ ಎನ್ನುವಂತಾಗಿದೆ.ಒಟ್ಟಾರೆ ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮಳೆಯ ಒರತೆಗಳಾದ ಕೆರೆ-ಕಟ್ಟೆಗಳು ಹೇಳಹೆಸರಿಲ್ಲದಂತಾಗಿ, ಮುಂದಿನ ದಿನಗಳಲ್ಲಿ ಚಿತ್ರಗಳಲ್ಲಿ ಮಾತ್ರ ಅವುಗಳ ಸೊಬಗನ್ನು ವೀಕ್ಷಿಸಬೇಕಾದ ಅನಿವಾರ್ಯತೆ ನಮಗೆ ಎದುರಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಹಾಗಾಗಿ ಮುಂದಿನ ದಿನಗಳಲ್ಲಾದರೂ ಅರಣ್ಯಗಳನ್ನು ಬೆಳೆಸಿ, ಪರಿಸರವನ್ನು ಉಳಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗಬೇಕಾಗಿದೆ. ಮನೆಯಲ್ಲಿ ಒಂದು ಗಿಡ ನೆಟ್ಟು, ಅದನ್ನು ಪೋಷಿಸಿದರೆ, ಪ್ರಕೃತಿಗೆ ನಾವು ಕೊಡುಗೆ ನೀಡಿದಂತಾಗುತ್ತದೆ ಎಂಬ ಮಾತು ಅಕ್ಷರಷಹ ಸತ್ಯ.

ಹೀಗಾದಾಗ ಮುಂದಿನ ದಿನಗಳಲ್ಲಿ ಹತ್ತು ವರ್ಷಗಳ ಹಿಂದಿನ ವೈಭವ ಮರುಕಳಿಸುವುದರಲ್ಲಿ ಯಾವುದೇ ಸಂಶಯ ಇಲ್ಲ. ಆಗಾದಾಗ ಮಾತ್ರ ಮಳೆರಾಯನಿಗೆ ನಮ್ಮ ಮೊರೆ ಕೇಳಿಸಿ, ಇಳೆ ತಂಪಾಗಿಸುವುದರಲ್ಲಿ ಸಂಶಯವಿಲ್ಲ ಅಲ್ಲವೇ? ಹಾಗಾಗಿ ಇಂದೇ ಒಂದು ಸಸಿ ಬೆಳೆಸೋಣವೇ?